ರಾಜ್ಯದ ಹಲವೆಡೆ ಹವಾಯಿ ಚಪ್ಪಲಿಗಳನ್ನು ತಯಾರಿಸುವ ಕೆಲವು ಕಂಪೆನಿಗಳು ಪರಿಸರ ಕಾಳಜಿಯನ್ನು ಮರೆತು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಆಘಾತಕಾರಿ. ಈ ಕಂಪೆನಿಗಳು ಹವಾಯಿ ಪಾದರಕ್ಷೆಯ ಸೋಲ್ ತಯಾರಿಸಲು ಬಳಸುವ ಕಚ್ಚಾ ಪದಾರ್ಥವು ಚಾಪೆಯಂತೆ ವಿಶಾಲವಾದ ದೊಡ್ಡ ರಬ್ಬರ್ ಹಾಳೆಯ ರೂಪದಲ್ಲಿರುತ್ತದೆ.
ಇದರಿಂದ ಚಪ್ಪಲಿ ತಯಾರಕರು ತಮಗೆ ಬೇಕಾದ ಅಳತೆಗೆ ಮತ್ತು ಆಕಾರಕ್ಕೆ ರಬ್ಬರ್ ಸೋಲ್ಗಳನ್ನು ಕತ್ತರಿಸುತ್ತಾರೆ. ನಂತರ ಅಲ್ಲಿ ಉಳಿಯುವ, ಉಪಯೋಗಕ್ಕೆ ಬಾರದ, ಮೈಯೆಲ್ಲಾ ತೂತಾದ ರಬ್ಬರ್ ಹಾಳೆಯ ತ್ಯಾಜ್ಯವು ಸದ್ದಿಲ್ಲದೆ ಬೆಲ್ಲ ತಯಾರಿಸುವ ಆಲೆಮನೆಗಳ ಒಲೆ ಸೇರುತ್ತಿದೆ. ತನ್ಮೂಲಕ ಈ ಒಲೆಗಳು ಸೂಸುವ ವಿಷಾ ನಿಲವು ವಾಯುಮಂಡಲವನ್ನು ಸೇರಿ, ಉಸಿರಾಟ ಸಂಬಂಧಿ ಕಾಯಿಲೆಗಳಿಗೆ ಪರೋಕ್ಷವಾಗಿ ಕಾರಣವಾಗುತ್ತಿದೆ.
ಇದು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಿಳಿಯದೇ? ಈ ವಿಷಪೂರಿತ ಉರುವಲಿನಿಂದ ಬೇಯಿಸಿದ ಬೆಲ್ಲ ಸೇವಿಸಿದರೆ ಆರೋಗ್ಯಕ್ಕೆ ಹಾನಿಕರವಲ್ಲವೇ? ಇದನ್ನು ತಜ್ಞರಷ್ಟೇ ಹೇಳಲು ಸಾಧ್ಯ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೂಡಲೇ ಎಚ್ಚೆತ್ತುಕೊಂಡು, ಈ ತ್ಯಾಜ್ಯ ಬಳಸುವುದರಿಂದ ಆಗಬಲ್ಲ ದುಷ್ಪರಿಣಾಮ ಕುರಿತಾಗಿ ರೈತರಲ್ಲಿ ಜಾಗೃತಿ ಮೂಡಿಸಬೇಕು. ಅದನ್ನು ಬಳಸದಂತೆ ಅವರಿಗೆ ತಿಳಿಹೇಳಬೇಕು. ಇದನ್ನು ಅವರಿಗೆ ಪೂರೈಸುವವರಿಗೆ ದಂಡ ವಿಧಿಸಬೇಕು.