ಈಗಿನ ವ್ಯವಸ್ಥೆಯಲ್ಲಿ ದೇಶದಲ್ಲಿ ನಾಗರಿಕರಿಗೆ ಜನಪರವಾದ ಸಮರ್ಥ ರಾಜಕೀಯ ಪರ್ಯಾಯಶಕ್ತಿ ದೊರೆಯದೇ ಇರುವುದರಿಂದ ‘ಅವರ ಬಿಟ್ಟು ಇವರು, ಇವರ ಬಿಟ್ಟು ಅವರು’ ಎನ್ನುವ ಮಕ್ಕಳ ಆಟದಂತಾಗಿದೆ. ಒಮ್ಮೆ ಒಂದು ಪಕ್ಷಕ್ಕೆ, ಮತ್ತೊಮ್ಮೆ ಮತ್ತೊಂದು ಪಕ್ಷಕ್ಕೆ ಚುಕ್ಕಾಣಿ ಹಿಡಿಯುವ ಅವಕಾಶ ದೊರೆಯುತ್ತಿದೆ. ರಾಜಕೀಯ ಪರ್ಯಾಯ ನಿರ್ಮಾಣದಲ್ಲಿ ತೊಡಗಿದವರು ಪರಮಸ್ವಾರ್ಥಿಗಳಾಗಿ, ಅವಕಾಶವಾದಿಗಳಾಗಿ ಮಾರ್ಪಟ್ಟಿದ್ದರಿಂದ ಜನರು ಭ್ರಮನಿರಸನಕ್ಕೆ ಒಳಗಾಗಿದ್ದಾರೆ.
ಅಂದಮಾತ್ರಕ್ಕೆ ಇಂಥ ಪ್ರಯತ್ನವನ್ನೇ ಬೇಡ ಎನ್ನಲಾಗದು. ಪರ್ಯಾಯ ರಾಜಕಾರಣದ ಹುಡುಕಾಟ ನಡೆಯಲೇಬೇಕು. ಇದರ ಅಗತ್ಯದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ನಿತ್ಯನಿರಂತರವಾಗಿ ನಡೆಯಬೇಕು. ವಿವಿಧ ಜನಪರ ಸಂಘಟನೆಗಳು ಸೇರಿ ಧಾರವಾಡದಲ್ಲಿ ‘...ಜನಪರ್ಯಾಯ ಸಾಧ್ಯತೆಗಳ ಚಿಂತನಾ ಸಮಾವೇಶ’ ನಡೆಸಿರುವುದು ಸ್ವಾಗತಾರ್ಹ. ಇಂಥ ಸಮಾವೇಶಗಳು ಮೇಲಿಂದ ಮೇಲೆ ರಾಜ್ಯ ಹಾಗೂ ದೇಶದ ವಿವಿಧೆಡೆ ನಡೆಯಬೇಕು.
ಸಮಾವೇಶದಲ್ಲಿ ದೇವನೂರ ಮಹಾದೇವ ಅವರು ‘ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ದೇಶದ ಭವಿಷ್ಯವೂ ಗ್ರೀಸ್ನ ಹಾಗೆ ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ’ ಎಂದು ಕಳವಳಪಟ್ಟಿದ್ದಾರೆ (ಪ್ರ.ವಾ., ಜುಲೈ 10). ಈ ಬಗೆಯ ಆರ್ಥಿಕ ದಿವಾಳಿತನಕ್ಕೆ ಕಾರಣವಾದ ರಾಜಕೀಯ ಶಕ್ತಿಗಳ ಒಂದು ಕೈಯಲ್ಲಿ ಕೋಮುವಾದದ ದಳ್ಳುರಿ, ಇನ್ನೊಂದು ಕೈಯಲ್ಲಿ ಭ್ರಷ್ಟಾಚಾರದ ಹರಿತವಾದ ಆಯುಧ ಇದೆ.
ಅಂಥ ಶಕ್ತಿಗಳು ಎದುರಿಗೆ ಬಂದವರನ್ನು ಸುಡುತ್ತ, ಕತ್ತರಿಸುತ್ತ ನಡೆದಿವೆ. ಇಂಥ ಭಯಾನಕ ಸ್ಥಿತಿಯನ್ನು ಬರೀ ಸಮಾವೇಶಗಳ ಮೂಲಕ ಎದುರಿಸಲಾಗದು. ಇದಕ್ಕಿರುವ ಒಂದೇ ಒಂದು ದಾರಿ ಎಂದರೆ ಪ್ರಬಲ ಜನಾಂದೋಲನ. ಬೀದಿಗಿಳಿದು ಜನರಲ್ಲಿ ತಿಳಿವಳಿಕೆ ಮೂಡಿಸಿ, ಅವರ ವಿಶ್ವಾಸ ಗಳಿಸಿ ರಾಜಕೀಯ ಪರ್ಯಾಯವನ್ನು ಜನರ ನಡುವಿನಿಂದಲೇ ಸೃಷ್ಟಿಸಬೇಕಾದ ಅನಿವಾರ್ಯ ಇದೆ.