ಜಾತಿಗಣತಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ. ರಾಜ್ಯದಲ್ಲಿ ಜಾತಿ, ಉಪಜಾತಿ ಮತ್ತು ಒಳಪಂಗಡಗಳು ಲೆಕ್ಕವಿಲ್ಲದಷ್ಟು ಇವೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರ ಸಂಖ್ಯೆ, ಜಾತಿ ಮತ್ತು ಒಳಪಂಗಡಗಳನ್ನು ಗುರುತಿಸಿ ಅವರ ಸ್ಥಿತಿಗತಿ, ಜೀವನಮಟ್ಟ ಅರಿತು ಅವರನ್ನು ಮುಖ್ಯವಾಹಿನಿಗೆ ತರುವಂತಹ ಕೆಲಸವನ್ನು ಮಾಡಬೇಕಾದದ್ದು ಸರ್ಕಾರದ ಕರ್ತವ್ಯ. ಅದಕ್ಕೆ ಜಾತಿಗಣತಿ ನೆರವಾಗಲಿದೆ. ಕಾಲಕಾಲಕ್ಕೆ ಜನಸಂಖ್ಯೆ ಬದಲಾಗುತ್ತಿರುತ್ತದೆ. ಅದಕ್ಕೆ ಅನುಗುಣವಾಗಿ ಯೋಜನೆಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯ ಇದೆ.
ಜಾತಿಗಣತಿ ಮಾಡುತ್ತಿರುವುದನ್ನು ಜಾತಿ ಒಡೆಯುವ ಕೆಲಸವೆಂದು ನಾವೇಕೆ ನಕಾರಾತ್ಮಕವಾಗಿ ಯೋಚಿಸಬೇಕು. ನಿಖರವಾದ ಜಾತಿಗಣತಿ ಇಲ್ಲದಿದ್ದರೆ, ಸಮಾಜದ ಕೊನೆಯ ವ್ಯಕ್ತಿಗೆ ಯಾವ ಆಧಾರದ ಮೇಲೆ ಸೌಲಭ್ಯಗಳನ್ನು ನೀಡಲು ಸಾಧ್ಯ? ಅಂಕಿ ಅಂಶಗಳಿಲ್ಲದೆ ಮೀಸಲಾತಿ ಕಲ್ಪಿಸುವುದಾದರೆ ಅದು ಅವೈಜ್ಞಾನಿಕವಾಗುವುದಿಲ್ಲವೇ? ಸಾಮಾಜಿಕ ಭದ್ರತೆಯನ್ನು ಒದಗಿಸುವುದಾದರೂ ಹೇಗೆ ಎಂಬ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೂ ಜಾತಿಗಣತಿಯೇ ಉತ್ತರ. ಆದಕಾರಣ ಜಾತಿಗಣತಿ ಅತ್ಯಗತ್ಯ.