ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ, ಅರುಣ್ ಜೇಟ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗುತ್ತಲೇ ಇದೆ.
ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿರುವ ಸಚಿವರಿಗೆ ಈ ಸಮಸ್ಯೆ ಉಲ್ಬಣವಾಗಿರುವುದಕ್ಕೆ ಹಣಕಾಸು ಮತ್ತು ರಕ್ಷಣಾ ಖಾತೆಗಳ ಹೊರೆಯೂ ಕಾರಣ ಆಗಿರಬಹುದು. ಪಶ್ಚಿಮದ ಗಡಿಯಲ್ಲಿ ಪಾಕಿಸ್ತಾನದಿಂದ ಆಗುತ್ತಿರುವ ಕಿರಿಕಿರಿ ಹಾಗೂ ದೇಶದ ಆರ್ಥಿಕ ಸ್ಥಿತಿಯನ್ನು ಮತ್ತೆ ದಾರಿಗೆ ತರುವ ಎರಡು ಮಹತ್ತರವಾದ ಜವಾಬ್ದಾರಿ ಅವರ ಮೇಲಿದೆ. ಐದು ವಾರಗಳ ಆಸ್ಪತ್ರೆ ವಾಸದ ಬಳಿಕ ಸಚಿವರು ಇತ್ತೀಚೆಗಷ್ಟೇ ಮರಳಿದ್ದಾರೆ. ಹಣಕಾಸು ಹಾಗೂ ದೇಶದ ಭದ್ರತೆ– ಇವರೆಡೂ ಅತ್ಯಂತ ಮಹತ್ವದ ಜವಾಬ್ದಾರಿಗಳಾದ್ದರಿಂದ, ಪ್ರಧಾನಿಯವರು ಜೇಟ್ಲಿ ಮೇಲಿನ ಹೊರೆಯನ್ನು ಸ್ವಲ್ಪಮಟ್ಟಿಗೆ ಇಳಿಸಿದರೆ ಸೂಕ್ತ. ಅನವಶ್ಯಕವಾಗಿ ಪರೀಕ್ಷೆ ಮಾಡುವುದು ಬೇಡ – ಜೇಟ್ಲಿಯವರ ಪ್ರಾಮಾಣಿಕ ಸೇವೆ ಭಾರತಕ್ಕೆ ಬೇಕಿದೆ.