ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಂಶೋಧನಾರ್ಥಿಗಳು ಜ್ಞಾನಾರ್ಜನೆ ಮತ್ತು ಸಂಶೋಧನಾತ್ಮಕ ಚಟುವಟಿಕೆಗಳಿಗೆ ಹೆಚ್ಚು ಮಹತ್ವ ನೀಡಬೇಕು. ಆದರೆ ಇತ್ತೀಚೆಗೆ ಅಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಜಾತಿ, ಧರ್ಮ, ಪಂಥಗಳ ಹೆಸರಿನಲ್ಲಿ ವಿವಾದಗಳನ್ನು ಸೃಷ್ಟಿಸಿ ಗಲಭೆಗಳಿಗೆ, ಪ್ರತಿಭಟನೆಗಳಿಗೆ ಕಾರಣರಾಗುತ್ತಿರುವುದು ವಿಷಾದನೀಯ.
ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಬಗ್ಗೆ ಕುಟುಂಬ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತದೆ. ಉತ್ತಮ ಅಧ್ಯಾಪಕರಾಗಿ, ಸಂಶೋಧಕರಾಗಿ, ವಿದ್ವಾಂಸರಾಗಿ ಅವರು ಹೊರಬರುತ್ತಾರೆ, ಕುಟುಂಬಕ್ಕೆ ಆಸರೆಯಾಗುತ್ತಾರೆ ಎಂಬ ಕನಸು ಕಟ್ಟಿಕೊಂಡಿರುತ್ತದೆ. ಅದಕ್ಕೆ ಭಂಗ ತರಬಾರದು.
‘ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ’ ಎಂಬ ಬಸವಣ್ಣನವರ ವಚನದ ಸಾಲಿನಂತೆ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದ ಉದ್ದೇಶವನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.