ಮಹಾದಾಯಿ ಯೋಜನೆಗೆ ಆಗ್ರಹಿಸಿ ನರಗುಂದದಲ್ಲಿ ಎರಡು ತಿಂಗಳಿಗೂ ಹಿಂದಿನಿಂದ ಹಾಗೂ ನವಲಗುಂದದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಹೋರಾಟಕ್ಕೆ ಇದುವರೆಗೂ ಮನ್ನಣೆ ಸಿಕ್ಕಿಲ್ಲ. ಇಷ್ಟಾದರೂ ಉತ್ತರ ಕರ್ನಾಟಕದ ಪ್ರಮುಖ ಪಟ್ಟಣ, ನಗರಗಳಲ್ಲಿ ಬಂದ್ ಆಚರಿಸುವಾಗ ಟೈರ್ಗಳನ್ನು ಸುಟ್ಟು ಪ್ರತಿಭಟನೆ ನಡೆಸಲಾಗುತ್ತದೆ.
ಪ್ರಮುಖ ಡಾಂಬರು ರಸ್ತೆಗಳ ಮೇಲೆ ಹತ್ತೆಂಟು ಕಡೆ ಟೈರ್ಗಳನ್ನು ಸುಡುತ್ತಿರುವುದರಿಂದ ರಸ್ತೆ ಹಾಳಾಗುತ್ತಿದೆ. ಜೊತೆಗೆ ಟೈರ್ಗಳ ಹೊಗೆ ಸಾಕಷ್ಟು ಮಾಲಿನ್ಯವನ್ನುಂಟು ಮಾಡುತ್ತದೆ. ಹಾಳಾದ ರಸ್ತೆ ಬೇಗ ದುರಸ್ತಿಯಾಗುವುದು ಕಷ್ಟ. ನಮ್ಮ ರಸ್ತೆಗಳನ್ನು ನಾವೇ ಹಾಳುಮಾಡಿಕೊಂಡು ತೊಂದರೆ ಅನುಭವಿಸಬೇಕಾಗುತ್ತದೆ. ಟೈರ್ ಸುಡುತ್ತಿರುವ ಹೋರಾಟಗಾರರ ಫೋಟೊಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ. ಅಷ್ಟರ ಮಟ್ಟಿನ ಪ್ರಚಾರ ಬಿಟ್ಟರೆ ಇಂತಹ ಕ್ರಮದಿಂದ ಬೇರೇನೂ ಪ್ರಯೋಜನ ಕಂಡುಬರುತ್ತಿಲ್ಲ.
ಟೈರ್ ಸುಟ್ಟಿದ್ದಕ್ಕೆ ಎಚ್ಚರಗೊಂಡು ಸರ್ಕಾರಗಳು ಯಾವ ಕೆಲಸಗಳನ್ನೂ ಮಾಡಿದ ಉದಾಹರಣೆ ಇಲ್ಲ. ಅಷ್ಟಾದರೂ ಟೈರ್ ಸುಡಲೇಬೇಕು ಎಂದಾದರೆ, ರಸ್ತೆ ಹಾಳಾಗುವುದನ್ನು ತಪ್ಪಿಸಲು ಪ್ರತಿಭಟನಾಕಾರರು ಯಾವುದಾದರೂ ಬಯಲಿನಲ್ಲಿ ಎಷ್ಟು ಬೇಕಾದರೂ ಟೈರುಗಳನ್ನು ಸುಡಲಿ.