ಮೈಸೂರು ಮತ್ತು ಬೆಂಗಳೂರು ನಡುವೆ ನಿತ್ಯ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ಗಳು ಮಾರ್ಗ ಮಧ್ಯೆ ಊಟ–ತಿಂಡಿಗಾಗಿ ಅಧಿಕೃತ ತಂಗುದಾಣಗಳಲ್ಲಿ ನಿಲ್ಲುತ್ತವೆ. ಮೈಸೂರಿನಿಂದ ಹೋಗುವಾಗ ಪ್ರಯಾಣಿಕರು ರಸ್ತೆಯ ಎಡಗಡೆ ಒಂದು ಹೋಟೆಲನ್ನು (ಅದು ಬಸ್ ನಿಲ್ದಾಣದಿಂದ ಪ್ರತ್ಯೇಕವಿದೆ) ಬಳಸಬೇಕಾಗಿದ್ದು, ಬೆಂಗಳೂರಿನಿಂದ ವಾಪಸ್ ಆಗುವಾಗ ಅದೇ ಹೋಟೆಲ್ನ ಇನ್ನೊಂದು ಮಗ್ಗುಲಲ್ಲಿರುವ (ಬಸ್ ನಿಲ್ದಾಣಕ್ಕೆ ಅಂಟಿದಂತೆಯೇ ಇರುವ) ಹೋಟೆಲನ್ನು ಆಶ್ರಯಿಸಬೇಕಾಗಿರುತ್ತದೆ. ಅಸಲಿಗೆ ಈ ಎರಡೂ ಹೋಟೆಲ್ಗಳು ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕೃತ ಸೌಲಭ್ಯಗಳೆನಿಸಿದರೂ ಇಲ್ಲಿ ಕಾಫಿ, ತಿಂಡಿ, ಊಟದ ದರಗಳಲ್ಲಿ ವ್ಯತ್ಯಾಸ ಇರುತ್ತದೆ.
ಒಂದು ಹೋಟೆಲಿನಲ್ಲಿ ಕಾಫಿಗೆ ₹ 10 ಇದ್ದರೆ ಇನ್ನೊಂದು ಹೋಟೆಲಿನಲ್ಲಿ ₹15. ಮೇಲಾಗಿ ಎರಡೂ ಕಡೆ ದರ ಪಟ್ಟಿ ಪ್ರಕಟಿಸಿಲ್ಲ. ಗುತ್ತಿಗೆಯ ಕರಾರಿನಲ್ಲಿ ದರ ಪಟ್ಟಿ ಪ್ರಕಟಿಸುವಂತೆ ನೋಡಿಕೊಳ್ಳಬೇಕಾದದ್ದು ಸಾರಿಗೆ ನಿಗಮದ ಆದ್ಯ ಕರ್ತವ್ಯವಲ್ಲವೇ? ಹೋಟೆಲಿನವರು ತಮಗೆ ಬೇಕಾದ ಸೈಜಿನ ಪೇಪರ್ ಕಪ್ಗಳನ್ನು ಬಳಸಿ, ತೋಚಿದಷ್ಟು ಕಾಫಿ ಅಥವಾ ಟೀಯನ್ನು ನೀಡಿ ಲಾಭ ಗಳಿಸುತ್ತಿದ್ದಾರೆ. ಅದರ ಬದಲು ಸಂಸ್ಥೆಯು ಈ ಹೋಟೆಲ್ಗಳ ಮಾಲೀಕರಿಗೆ, ತಮ್ಮದೇ ಬ್ರ್ಯಾಂಡಿನ ನಿಗದಿತ ಸೈಜಿನ ಪೇಪರ್ ಕಪ್ಗಳನ್ನು ವಿತರಿಸಿದರೆ ಪ್ರಮಾಣದಲ್ಲಿ ಮೋಸ ಹೋಗದಂತೆ ಮಾಡಬಹುದು.