ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಪ್ರೊ.ಬಿ.ಕೃಷ್ಣಪ್ಪನವರ ಜನ್ಮದಿನ ಕಾರ್ಯಕ್ರಮದಲ್ಲಿ ಪ್ರೊ. ಚಂದ್ರಶೇಖರ ಪಾಟೀಲ ಅವರು, ‘ದೇವರು ನಾಶವಾಗದೆ ಜಾತಿ ನಾಶವಾಗದು’ (ಪ್ರ.ವಾ., ಜೂನ್ 10) ಎಂದು ಹೇಳಿರುವುದು ಅಸಮರ್ಪಕ.
ಜಗದ ಉಗಮದ ಕಾಲದಿಂದಲೂ ಆದಿಮಾನವರಾಗಲಿ, ಇಂದಿನ ಹೈಟೆಕ್ ಜನರಾಗಲಿ ತಮ್ಮದೇ ಆದ ಪರಿಕಲ್ಪನೆಯಲ್ಲಿ ಮತ್ತು ತಮ್ಮ ತಮ್ಮ ಭಾವಗಳಿಗೆ ತಕ್ಕಂತೆ ಪ್ರಕೃತಿ ಹಾಗೂ ದೇವರನ್ನು ಪೂಜಿಸುತ್ತಾ ಬಂದಿದ್ದಾರೆ. ಸಂಸ್ಕೃತಿಯ ಪ್ರತೀಕವಾದ ಇಂತಹ ನಂಬಿಕೆಯನ್ನು ತಲೆಕೆಳಗು ಮಾಡಬಾರದು.
ಜನಪದರಲ್ಲಾಗಲಿ, ಕೆಳಸ್ತರದವರಲ್ಲಾಗಲಿ ದೇವ ರನ್ನು ಪೂಜಿಸುವ ಪರಿಪಾಠ ಭದ್ರವಾಗಿ ನೆಲೆಯೂರಿದೆ. ಇದಕ್ಕೆ ಯಾವುದೇ ಧಕ್ಕೆಯಾಗಬಾರದು. ಜಗತ್ತನ್ನು ನಡೆಸುವುದು ವೈಜ್ಞಾನಿಕ ಶಕ್ತಿ ಎಂದು ನಂಬುವವರ ನಡುವೆಯೇ, ಆ ಶಕ್ತಿಯೇ ದೇವರೆಂಬ ಸಮರ್ಥನೆಯೂ ಮೈದಾಳಿದೆ.
ವಿದೇಶಗಳಲ್ಲೂ ನಮ್ಮ ಹಿಂದೂ ಸಂಸ್ಕೃತಿಯ ಅಂಗವಾದ ದೇವರ ಬಗ್ಗೆ ಭಕ್ತಿ ಭಾವ ಅಭಿವ್ಯಕ್ತವಾಗುತ್ತಿದೆ. ಹೀಗೆ ದೇವರನ್ನು ಪರಕೀಯರೇ ಒಪ್ಪಿಕೊಂಡು ಅಪ್ಪಿಕೊಳ್ಳುತ್ತಿರುವಾಗ, ಸ್ಥಳೀಯರು ದೇವರ ಅಸ್ತಿತ್ವವನ್ನು ಅಲ್ಲಗಳೆಯುವುದು ಸರಿಯಲ್ಲ.