ದೋಸೆ ತುಟ್ಟಿಯಾಗುವುದಕ್ಕೆ ಕಾವಲಿಯೇ ಕಾರಣ ಎಂದು ಆರ್ಬಿಐ ಗವರ್ನರ್ ಅಪ್ಪಣೆ ಕೊಡಿಸಿದ್ದಾರೆ (ಪ್ರ.ವಾ., ಫೆ.15). ದೋಸೆ ತಯಾರಿಸಲು ಉದ್ದಿನಬೇಳೆಯು ಮೂಲ ಸಾಮಗ್ರಿಯಾಗಿ ಬೇಕಾಗುತ್ತದೆ ಎಂಬ ತಥ್ಯ ಅವರಿಗೆ ಗೊತ್ತಿಲ್ಲದಿರಲೂ ಸಾಕು!
ರೈತ ಬೆಳೆದ ತೊಗರಿಬೇಳೆ, ಉದ್ದಿನಬೇಳೆ, ಹೆಸರುಬೇಳೆ ಮುಂತಾದ ಬೇಳೆ ಕಾಳುಗಳನ್ನು ದಲ್ಲಾಳಿಗಳು ಉಗ್ರಾಣಗಳಿಗೆ ಸಾಗಿಸಿ, ಅಕ್ರಮವಾಗಿ ದಾಸ್ತಾನು ಮಾಡಿಕೊಂಡಿರುವುದು ತಪ್ಪಲ್ಲ.
ಇಂತಹ ಅಕ್ರಮ ದಾಸ್ತಾನುಗಳ ಕುರಿತು ಕೂಲಂಕಷ ವಿವರ ತಿಳಿದಿದ್ದೂ, ಅಂಥವರ ವಿರುದ್ಧ ಕ್ರಮ ಕೈಗೊಂಡ ನಾಟಕವಾಡಿಯೂ, ಬೇಳೆ ಕಾಳುಗಳ ಬೆಲೆ ಇಳಿಸುವಲ್ಲಿ ಉದ್ದೇಶಪೂರ್ವಕವಾಗಿ ನಿಷ್ಕ್ರಿಯವಾಗಿರುವುದು ಸರ್ಕಾರದ ತಪ್ಪಲ್ಲ. ಕುಣಿಯಲು ಬಾರದಿದ್ದರೆ, ನೆಲದ್ದೇ ತಪ್ಪು; ಕುಣಿಯುವವನದ್ದಲ್ಲ!
ಆಹಾರ ಧಾನ್ಯಗಳ ಬೆಲೆ ಎಷ್ಟೇ ಏರಿದರೂ, ಹೋಟೆಲ್ಗಳಲ್ಲಿ ಸಿಗುವ ತಿಂಡಿ, ತೀರ್ಥಗಳ ಬೆಲೆ ಏರಕೂಡದು. ಬದಲಾಗಿ, ಹೋಟೆಲ್ನವರು ಆಯಾ ತಿಂಡಿ, ತೀರ್ಥಗಳನ್ನು ತಯಾರಿಸುವ ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳಬೇಕು. ಆದರೆ, ಸಂಶೋಧನೆ ಮಾಡಲು ಹೋಟೆಲ್ನವರೇನು ವಿಜ್ಞಾನಿಗಳೇ? ಆದ್ದರಿಂದ, ಈ ಅವಶ್ಯಕತೆ ಪೂರೈಸಲು ವಿಜ್ಞಾನಿಗಳ ಒಂದು ಸಂಸ್ಥೆಯನ್ನೇ ಸ್ಥಾಪಿಸಬೇಕು.
ಇಂಥ ವಿಜ್ಞಾನಿಗಳ ಘನತೆಗೆ ಸರಿದೂಗುವಂತೆ ಅವರ ವೇತನ ಶ್ರೇಣಿ, ವಸತಿ ಸೌಕರ್ಯ, ವಾಹನ ಸೌಲಭ್ಯಗಳೂ ಏರ್ಪಾಡಾಗಬೇಕು. ಶ್ರೀಸಾಮಾನ್ಯ ಪ್ರಾಮಾಣಿಕವಾಗಿ ತೆರುವ ತೆರಿಗೆ ಹಣವೇ ಇಂತಹ ಘನ ಕಾರ್ಯಕ್ಕಾಗಿ ದಶಕಗಳ ಕಾಲ ವಿನಿಯೋಗವಾಗಬೇಕು!