ವೀರಶೈವ ಮಹಾಸಭಾದ ದಾಖಲೆಯಲ್ಲಿ ಬಳಕೆಯಾಗಿರುವ ‘ಕೀಳು ಜಾತಿ’ ಪದ ಪ್ರಯೋಗದ ಬಗ್ಗೆ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಮತ್ತು ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಅವರು ಆಕ್ಷೇಪ ವ್ಯಕ್ತಪಡಿಸಿರುವುದು ಆರೋಗ್ಯಕರ ಲಕ್ಷಣವಾಗಿದೆ (ಪ್ರ.ವಾ., ಜ. 11).
ಲಿಂಗಾಯತವೆಂಬ ಅಚ್ಚ ಕನ್ನಡ ಧರ್ಮವು ಹಿಂದೂ ಎಂಬ ಧರ್ಮ ಹುಟ್ಟು ಹಾಕಿದ ಜಾತಿ ವ್ಯವಸ್ಥೆಗೆ ಕಡುವಿರೋಧಿಯಾಗಿ ರೂಪುಗೊಂಡ ಧರ್ಮವೆಂಬುದನ್ನು ನಾವೆಲ್ಲರೂ ಸರಳವಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ‘ಕಣ್ತಪ್ಪಿನಿಂದಾದ ಪ್ರಮಾದವನ್ನು ಸರಿಪಡಿಸಲಾಗುವುದು’ ಎಂದು ಮಹಾಸಭಾ ಸ್ಪಷ್ಟೀಕರಣ ನೀಡಿರುವುದು ಸ್ವಾಗತಾರ್ಹ. ಆದರೆ ಇಂಥ ಲೋಪಗಳು ಆಗದಂತೆ ನೋಡಿಕೊಳ್ಳುವುದು ಅದರ ಹೊಣೆಗಾರಿಕೆಯಾಗಬೇಕಿತ್ತು.
ಲೀಲಾದೇವಿ ಮತ್ತು ಪ್ರಮೀಳಾ ಅವರಂತಹ ಪ್ರಜ್ಞಾವಂತಿಕೆ, ವಿವೇಕಯುತ ಗ್ರಹಿಕೆಯುಳ್ಳ ಮಹಿಳೆಯರು ಬಸವಣ್ಣನನ್ನು, ಲಿಂಗಾಯತ ಧರ್ಮವನ್ನು ಕಣ್ಗಾವಲಾಗಿ ರಕ್ಷಿಸಬಲ್ಲರು. ಈ ಅರ್ಥದಲ್ಲಿ ಅವರು ನಿಜ ಶರಣೆಯರು. ಕೆಲವರು ತಮ್ಮ ಹೆಸರಿನ ಹಿಂದೆ ಶರಣ, ಶರಣೆ ಎಂದು ಬರೆದುಕೊಂಡ ಮಾತ್ರಕ್ಕೆ ಶರಣರಾಗುವುದು ಅಸಂಭವ.