ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಸಹಜವಾಗಿ ಕೆಲವು ಕನ್ನಡ ಸಂಘಟನೆಗಳು ಹಾಗೂ ಸಾಹಿತಿ ವಲಯ ಆಕ್ರೋಶ ವ್ಯಕ್ತಪಡಿಸಿವೆ. ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವ ಚಿಂತನೆಯಲ್ಲಿದೆ. ಇಂತಹ ಅರ್ಜಿಯನ್ನು ವರಿಷ್ಠ ನ್ಯಾಯಾಲಯ ತಿರಸ್ಕರಿಸುವ ಸಾಧ್ಯತೆಗಳೇ ಹೆಚ್ಚು. ಈ ಸಂಗತಿ ಕಾನೂನು ಪಂಡಿತರು ಹಾಗೂ ಸರ್ಕಾರಕ್ಕೆ ಗೊತ್ತಿದ್ದರೂ ಅಂತಹ ಅರ್ಜಿಯನ್ನು ಅನಿವಾರ್ಯವಾಗಿ ದಾಖಲಿಸಬೇಕಾಗುತ್ತದೆ.
ಈ ಮಧ್ಯೆ ಕನ್ನಡ ಬೆಳವಣಿಗೆಗೆ ‘ಪರ್ಯಾಯ’ ಮಾರ್ಗಗಳನ್ನು ಕಂಡುಕೊಳ್ಳುವುದು ಅಪೇಕ್ಷಣೀಯ ಹಾಗೂ ಜಾಣತನ. ಪ್ರೌಢ ಶಿಕ್ಷಣ, ಕಾಲೇಜು, ಪದವಿ ಶಿಕ್ಷಣ ಹಾಗೂ ಪ್ರೊಫೆಷನಲ್ ಶಿಕ್ಷಣದಲ್ಲಿ ಕನ್ನಡವನ್ನು ‘ಒಂದು ಭಾಷೆ’ಯಾಗಿ ಕಡ್ಡಾಯಗೊಳಿಸಿ, ಅದರಲ್ಲಿಯೂ ತೇರ್ಗಡೆಯಾಗುವಂತಹ ನಿಯಮವನ್ನು ಜಾರಿಗೆ ತರಬೇಕು. ಈ ಕ್ರಮ ಅನುಸರಿಸಿದಲ್ಲಿ ಕನ್ನಡ ‘ತಂತಾನೆ’ ಬೆಳೆಯುತ್ತದೆ. ಸಾಹಿತಿಗಳು ಶಂಕೆ ಪಡುವಂತೆ ಕನ್ನಡ ಅಳಿಸಿ ಹೋಗುವುದಿಲ್ಲ.