ಈ ಪ್ರಕೃತಿ ಮಾತೆಯೇ ಹೀಗೆ. ಆಕೆಯ ನಡೆ ನಿಗೂಢ ಮತ್ತು ತರ್ಕಕ್ಕೆ ನಿಲುಕಲಾರದ್ದು. ನಮ್ಮ ರಾಜ್ಯದ ಚಿತ್ರಣವನ್ನೇ ನೋಡಿ: ಇಡೀ ಹೈದರಾಬಾದ್ ಕರ್ನಾಟಕ ಪ್ರದೇಶ ಮಳೆಗಾಗಿ ಆಕಾಶದತ್ತ ಮುಖ ಮಾಡಿರುವುದು ಒಂದೆಡೆಯಾದರೆ, ಮಹಾರಾಷ್ಟ್ರದಲ್ಲಿ ವಿಪರೀತ ಮಳೆಯಿಂದ ಈ ಭಾಗದ ಜಲಾಶಯಗಳೆಲ್ಲ ಭರ್ತಿಯಾಗಿ ಅಪಾರ ಪ್ರಮಾಣದ ನೀರು ಹರಿದು ಸಾಗರ ಸೇರುತ್ತಿದೆ. ನೆರೆ ಭೀತಿಯಿಂದ ನದಿ ಪಾತ್ರದ ಜನ ಪ್ರಾಣ ಉಳಿಸಿಕೊಳ್ಳಲು ಮನೆ ಮಠ ತೊರೆದು ಹೋಗಬೇಕಾದ ಅನಿವಾರ್ಯ ಬಂದೊದಗಿದೆ.
ಮುಂಗಾರು ವೈಫಲ್ಯದ ಹೊಡೆತದಿಂದ ನಲುಗಿರುವ ರೈತರು, ಎಲ್ಲೋ ಬಿದ್ದ ಮಳೆಯ ನೆರೆಯಿಂದ ತಪ್ಪಿಸಿಕೊಳ್ಳಲು ಮನೆ ಮಾರು ತ್ಯಜಿಸಬೇಕಾಗಿದೆ. ಒಟ್ಟಿನಲ್ಲಿ ಕಂಗಾಲಾದ ರೈತನ ಬಾಳು ಶೋಚನೀಯ. ನಿಸರ್ಗದ ನಿಯಮ ವನ್ನು ಪ್ರಶ್ನಿಸಲು ನಾವು ಯಾರು? ಆಕೆಯಲ್ಲಿ ‘ದಯೆ ತೋರು ಮಾತೆ’ ಎಂದು ದೀನರಾಗಿ ಬೇಡುವುದೊಂದೇ ನಮಗೆ ಉಳಿದ ಮಾರ್ಗ.