ಸಮಾಜದಲ್ಲಿ ಈಗ ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್ ಚೀಲಗಳದ್ದೇ ಕಾರುಬಾರು. ಈ ಕೊಳೆಯದ ಕಸ ಹೆಚ್ಚಾಗುತ್ತಿದ್ದಂತೆ ರೋಗ-ರುಜಿನಗಳೂ ಅಧಿಕವಾಗುತ್ತವೆ. ಇದು ಅರಿವಿಗೆ ಬಂದರೂ ಅದನ್ನು ಪಾಲಿಸಲಾರದಷ್ಟು ಅಜ್ಞಾನಿಗಳಾಗಿದ್ದೇವೆ. ಪ್ಲಾಸ್ಟಿಕ್ ಕೊಳೆಯದ ತ್ಯಾಜ್ಯವಾದ್ದರಿಂದ ಅದನ್ನು ಸುಟ್ಟು ಹಾಕಲಾರದೆ, ಉಳಿಸಿಕೊಳ್ಳಲೂ ಆಗದೆ ತ್ರಿಶಂಕು ಸ್ಥಿತಿಯಲ್ಲಿದ್ದೇವೆ.
ಇತ್ತೀಚೆಗಂತೂ ಅಂಗಡಿಗಳ ಮುಂದೆಲ್ಲ ಬರೀ ಪ್ಲಾಸ್ಟಿಕ್ ಚೀಲಗಳೇ ತುಂಬಿರುತ್ತವೆ. ಗಾಳಿಯಲ್ಲಿ ತೂರಾಡುತ್ತಾ ಎಲ್ಲೆಂದರಲ್ಲಿ ತೂರಿಕೊಂಡು, ಜನರಿಗೆ ತೊಂದರೆ ಕೊಡುತ್ತವೆ. ಹೀಗಿದ್ದರೂ ಸರ್ಕಾರ ಪ್ಲಾಸ್ಟಿಕ್ ಬಳಕೆಯನ್ನು ಯಾಕೆ ಸಂಪೂರ್ಣವಾಗಿ ನಿಷೇಧಿಸುತ್ತಿಲ್ಲ?
ಹಿಂದೆ ಮದುವೆ, ಗೃಹಪ್ರವೇಶ ಇತ್ಯಾದಿ ಸಮಾರಂಭಗಳಲ್ಲಿ ಹಲಸಿನ ಎಲೆಗಳಿಂದ ಮಾಡಿದ ಇಸ್ತ್ರಿ ಎಲೆ, ಬಾಳೆ ನಾರುಗಳ ಜೊನ್ನೆಗಳನ್ನೇ ಬಳಸುತ್ತಿದ್ದರು. ತರಕಾರಿಗಳನ್ನು ತರಲು ಬಟ್ಟೆ ಅಥವಾ ರಟ್ಟಿನ ಬ್ಯಾಗನ್ನು ಉಪಯೋಗಿಸುತ್ತಿದ್ದರು. ಕೆರೆಗಳಲ್ಲಿ ಬೆಳೆಯುತ್ತಿದ್ದ ತಾವರೆ ಎಲೆಗಳನ್ನು ಮಾಂಸ ಕಟ್ಟಲು, ಹೂ ಕಟ್ಟಲು ಬಳಸುತ್ತಿದ್ದರು.
ಈಗ ಇಂತಹ ಎಲ್ಲ ಕೆಲಸಗಳಿಗೂ ಪ್ಲಾಸ್ಟಿಕ್ ಕವರ್ಗಳೇ ಬಳಕೆಯಾಗುತ್ತಿವೆ. ಚಿಲ್ಲರೆ ಅಂಗಡಿಗಳಲ್ಲಿ ದೊರೆಯುವ ಕುರುಕಲು ತಿಂಡಿಗಳೂ ಪ್ಲಾಸ್ಟಿಕ್ ಚೀಲ ಬೇಕಾಗಿವೆ. ಹೋಟೆಲ್ಗಳಲ್ಲಿ ಊಟ ಕಟ್ಟುವುದಕ್ಕೆ, ಕಾಫಿ, ಟೀ ಕೊಡುವುದಕ್ಕೆ ಸಹ ವ್ಯಾಪಕವಾಗಿ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಕಚೇರಿಗಳಲ್ಲಿ ಟೀ, ಕಾಫಿ ಕುಡಿಯಲು ಬಳಸಿ ಬಿಸಾಡಿದ ಪ್ಲಾಸ್ಟಿಕ್ ಲೋಟಗಳ ಸಣ್ಣಗುಡ್ಡೆವೇ ಕಾಣಸಿಗುತ್ತವೆ.
ಪ್ಲಾಸ್ಟಿಕ್ ತ್ಯಾಜ್ಯ ಸುಟ್ಟರೆ ಅದರಲ್ಲಿನ ವಿನಾಶಕಾರಿ ರಾಸಾಯನಿಕ ಗಾಳಿಯಲ್ಲಿ ವಿಲೀನವಾಗಿ, ಎಲ್ಲ ಜೀವಿಗಳ ಮೇಲೂ ದುಷ್ಪರಿಣಾಮ ಉಂಟು ಮಾಡುತ್ತದೆ. ಮೊದಲು ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಬೇಕು. ಪ್ಲಾಸ್ಟಿಕ್ ಬಳಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಸವನ್ನು ದಾರಿಯಲ್ಲಿ ಬಿಸಾಡದೆ ಕಸದ ಡಬ್ಬಿಗಳಲ್ಲೇ ಹಾಕುವಂತೆ ತಾಕೀತು ಮಾಡಬೇಕು. ಹಾಗಾದಲ್ಲಿ ಮಾತ್ರ ನಮ್ಮದು ಪ್ಲಾಸ್ಟಿಕ್ ಹಾಗೂ ಕಸಮುಕ್ತ ರಾಜ್ಯವಾಗಲು ಸಾಧ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.