ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕಾರ್ಪೊರೇಟ್ ಸಾಲಗಳ ಪುನರ್-ರಚನೆ (ಸಿಡಿಆರ್) ಮಾಡುವ ಒಂದು ದೊಡ್ಡ ಮಾಫಿಯಾ ಇದ್ದು ಅದು ಎಲ್ಲಾ ಸಾರ್ವಜನಿಕ ರಂಗದ ಬ್ಯಾಂಕುಗಳನ್ನು ಗೆದ್ದಲಿನಂತೆ ಒಳಗಿಂದೊಳಗೇ ಕೊರೆದು ಟೊಳ್ಳು ಮಾಡುತ್ತಿದೆ.
ಇತ್ತೀಚಿನವರೆಗೆ ಎರಡೂವರೆ ಲಕ್ಷ ಕೋಟಿ ರೂಪಾಯಿಗೂ ಮಿಕ್ಕಿ ಬೃಹತ್ ಕಂಪೆನಿಗಳ ಸಾಲಗಳನ್ನು ಸಿಡಿಆರ್ ಅಡಿ ತರಲಾಗಿದ್ದು ಇದಕ್ಕಾಗಿ ಸುಮಾರು ರೂ. 25 ಸಾವಿರ ಕೋಟಿ ಬಡ್ಡಿ ಮನ್ನಾ ಮಾಡಲಾಗಿದೆ.
ಇದರಲ್ಲಿ ಶೇ 20ರಷ್ಟು ಅಂದರೆ ಸುಮಾರು ರೂ. 5,000 ಕೋಟಿಯಷ್ಟು ರಾಷ್ಟ್ರೀಕೃತ ಬ್ಯಾಂಕುಗಳ ಉನ್ನತಾಧಿಕಾರಿಗಳ ಹಾಗೂ ಹಣಕಾಸು ಸಚಿವಾಲಯದ ಅಧಿಕಾರಿಗಳ ಕಿಸೆಗೆ ಸೇರಿದೆ ಎಂಬ ಆಪಾದನೆಯಿದೆ. ಒಬ್ಬ ಬಡ ರೈತನಿಗೆ ಜುಜುಬಿ ಒಂದೆರಡು ಸಾವಿರ ರೂಪಾಯಿ ಸಾಲ ಮನ್ನಾ ಮಾಡಲು ನೂರಾರು ನಿಬಂಧನೆ ಹಾಕುವ ರಾಷ್ಟ್ರೀಕೃತ ಬ್ಯಾಂಕುಗಳು ದೊಡ್ಡ ದೊಡ್ಡ ಕಂಪೆನಿಗಳ ಕೋಟ್ಯಂತರ ರೂಪಾಯಿ ಸಾಲ ಮನ್ನಾ ಮಾಡಲು ತಕ್ಷಣ ತಯಾರಾಗುತ್ತವೆ.
ಮುಂಬೈ ಮತ್ತು ಉತ್ತರ ಭಾರತದ ಬ್ಯಾಂಕುಗಳಲ್ಲಿ ಈ ಸಿಡಿಆರ್ ಎಂಬ ಮೋಸ ಅತೀ ಹೆಚ್ಚು. ದಕ್ಷಿಣ ಭಾರತದ ಬ್ಯಾಂಕುಗಳಲ್ಲಿ ಸ್ವಲ್ಪವಾದರೂ ಪ್ರಾಮಾಣಿಕತೆ ಇನ್ನೂ ಉಳಿದಿದೆ.