ಸಂದರ್ಭಕ್ಕೆ ತಕ್ಕಂತೆ ವೇಷ ಹಾಗೂ ಮಾತು ಬದಲಿಸುವವರನ್ನು ಓತಿಕ್ಯಾತಕ್ಕೆ ಹೋಲಿಸುವುದು ನಮ್ಮ ಸಾಮಾಜಿಕ ಸಂದರ್ಭದಲ್ಲಿ ತೀರಾ ಸಾಮಾನ್ಯ. ರಾಜಕಾರಣಿಗಳಿಗೂ ಇದನ್ನು ಅನ್ವಯಿಸಬಹುದೆಂಬುದು ಜನಪ್ರಿಯ ಬಜೆಟ್ ಮಂಡಿಸಿದ ಶೆಟ್ಟರ್ರವರಿಗೆ ಸಿಹಿ ತಿನ್ನಿಸುತ್ತಿರುವ ರೇಣುಕಾಚಾರ್ಯರ ಚಿತ್ರವನ್ನು ಪತ್ರಿಕೆಯಲ್ಲಿ ನೋಡಿದ ಮೇಲೆ ಸರಿಯೆನ್ನಿಸಿತು.
ನರ್ಸ್ ಜೊತೆಗಿನ ರಾಸಲೀಲೆ, ಕುಮಾರಸ್ವಾಮಿಯವರ ಸರ್ಕಾರ ಬೀಳಿಸಲು ಶಾಸಕರನ್ನು ರೆಸಾರ್ಟ್ಗಳಲ್ಲಿ ಒತ್ತೆಯಾಳುಗಳಾಗಿ ಬಂಧಿಸಿಟ್ಟ ಪ್ರಕರಣ, ರೆಸಾರ್ಟ್ನಲ್ಲಿ ಶಾಸಕ ಗೆಳೆಯರೊಂದಿಗೆ ಸುಖಸಂಕಥಾಗೋಷ್ಠಿಯಲ್ಲಿ ಪಾಲುಗೊಂಡು ಅಲ್ಲಿಂದ ತಪ್ಪಿಸಿಕೊಂಡು ಬಂದು ಯಡಿಯೂರಪ್ಪನವರ ಗುಂಪಿನಲ್ಲಿ ಕಾಣಿಸಿಕೊಂಡ ಪ್ರಸಂಗ, `ಯಡಿಯೂರಪ್ಪ ನನ್ನ ನಾಯಕರು, ಅವರ ವಿರೋಧಿಗಳು ನನ್ನ ವಿರೋಧಿಗಳು' ಎಂದು ಪ್ರಮಾಣ ಮಾಡಿದ ಘಟನಾವಳಿ, ಈಗ ಯಡಿಯೂರಪ್ಪ ಪಾಳಯದಿಂದ ಶೆಟ್ಟರ್ ಪಾಳಯಕ್ಕೆ ವರ್ಗಾವಣೆಗೊಂಡ ರೇಣುಕಾಚಾರ್ಯರ ವಿಶ್ವರೂಪ, ಗಾಳಿ ಬಂದತ್ತ ತೂರಿಕೊಳ್ಳುವ ಅವಕಾಶವಾದಿ ಧೋರಣೆಯೆನ್ನಿಸುತ್ತದೆ.
ರೇಣುಕಾಚಾರ್ಯರಂಥ ಊಸರವಳ್ಳಿಯಂಥ ಸಂಚಾರಿ ಭಾವದವರನ್ನು ಯಡಿಯೂರಪ್ಪ ನಂಬಿದರು, ಕಠಿಣ ಸಂದರ್ಭದಲ್ಲಿ ರಕ್ಷಿಸಿದರು, ಬೆಂಬಲಿಸಿದರು. ಬಟ್ಟೆ ಬದಲಿಸುವಂತೆ ಪಕ್ಷ ನಿಷ್ಠೆ ಬದಲಿಸುವ ರೇಣುಕಾಚಾರ್ಯರಂಥವರ ವರ್ತನೆಯಿಂದ ಯಡಿಯೂರಪ್ಪ ಪಾಠ ಕಲಿಯುವುದು ಒಳ್ಳೆಯದು. ರೇಣುಕಾಚಾರ್ಯರು ವಹಿಸಿಕೊಂಡಿರುವ ಖಾತೆಯ ಮಹಿಮೆಯೊ ಏನೋ! ಈ ನಾಟಕದ ಟ್ರಾನ್ಸ್ಫರ್ ಸೀನರಿ.