‘ಬನವಾಸಿ ಕದಂಬೋತ್ಸವಕ್ಕೆ ಕುತ್ತು’ ಲೇಖನ (ಪ್ರ.ವಾ., ಜ. 9) ಓದಿ ಆಶ್ಚರ್ಯವಾಯಿತು. ಸಾಂಸ್ಕೃತಿಕ ಹಬ್ಬಗಳು ಸರ್ಕಾರಕ್ಕೆ ಈಗ ಏಕೋ ಅಪಥ್ಯವಾಗುತ್ತಿವೆ. ಎಲ್ಲದಕ್ಕೂ ಬರಗಾಲದ ನೆಪ! ವಿಧಾನ ಪರಿಷತ್ ಚುನಾವಣೆಗೆ ಬರ ಅಡ್ಡ ಬರಲಿಲ್ಲ. ಚುನಾವಣೆಯಲ್ಲಿ ರಾಜಾರೋಷವಾಗಿ ಹಣ ಹಂಚಲು ಬರ ತೊಡಕಾಗಲಿಲ್ಲ. ಶಿಲಾನ್ಯಾಸ, ಉದ್ಘಾಟನಾ ಸಮಾರಂಭಗಳಿಗೆ ಬರದಿಂದ ತೊಂದರೆಯಾಗದು. ಉತ್ಸವ, ಸಾಂಸ್ಕೃತಿಕ ಹಬ್ಬಗಳಿಗೆ ಮಾತ್ರ ಏಕೆ ಬರೆ?
ಬರದ ಹೆಸರಲ್ಲಿ ದಸರಾ ಸೊರಗಿತು. ಅದರಿಂದ ಪ್ರವಾಸೋದ್ಯಮ ಕೊರಗಿತು. ಉತ್ತರ ಕರ್ನಾಟಕದ ಬಾದಾಮಿ ಉತ್ಸವ, ಲಕ್ಕುಂಡಿ ಉತ್ಸವ ಆಚರಣೆಯ ಸೊಲ್ಲೇ ಇಲ್ಲ. ದಾಸವಾಣಿ ಹಾಗೂ ವಚನವಾಣಿ ಸಂಗೀತ ಉತ್ಸವಗಳನ್ನು ಹಂಪಿ ಮತ್ತು ಕೂಡಲ ಸಂಗಮದಲ್ಲಿ ಆಚರಿಸುವುದನ್ನೇ ಮರೆತಂತಿದೆ. ದೇಹಕ್ಕೆ ಅನ್ನ ಎಷ್ಟು ಮುಖ್ಯವೊ ಮನಸ್ಸಿನ ನೆಮ್ಮದಿಗೆ ಸಾಂಸ್ಕೃತಿಕ ಹಬ್ಬಗಳೂ ಅಷ್ಟೇ ಮುಖ್ಯ. ಬರದ ನೆಪದಲ್ಲಿ ಆಚರಣೆಗಳಿಗೆ ಕುತ್ತು ತರುವುದು ಬೇಡ.