ರೈತರ ಜಮೀನಿಗೆ ನೀರುಣಿಸಲು ಮಲಪ್ರಭಾ ನದಿಯಿಂದ ಕೇವಲ 10 ದಿನ ನೀರು ಬಿಡಲಾಯಿತು. ಆದರೆ ರೈತರ ಸಾವಿರಾರು ಎಕರೆ ಜಮೀನಿಗೆ ಹನಿ ನೀರು ಸಿಗದೆ ಬೆಳೆ ಒಣಗಿಹೋಯಿತು. ಬಿಟ್ಟ ನೀರೆಲ್ಲಾ ಬಲಾಢ್ಯ ರೈತರ ಪಾಲಾಯಿತು. ಹೊಡೆದಾಡಿ ಬಡಿದಾಡಿದರೂ ತಮ್ಮ ಕೆಳಗಿನ ಹೊಲದ ರೈತರಿಗೆ ಹನಿ ನೀರು ಬಿಡದಾದಾಗ, ಸಂಬಂಧಿಸಿದ ನೀರಾವರಿ ಅಧಿಕಾರಿಗಳಿಗೆ ಈ ವಿಷಯ ವಿವರಿಸಿ, ಅಂಗಲಾಚಿ ಇನ್ನಷ್ಟು ನೀರು ಬಿಡಲು ಕೇಳಿದರೂ, ಸರ್ಕಾರ ಕೊಟ್ಟ ಹವಾನಿಯಂತ್ರಿತ ಕಾರಿನಲ್ಲಿ ಬಂದು ಇತ್ತ ನೋಡಲಿಲ್ಲ. ಯಾವ ವಿಮೆಯೂ ಇಲ್ಲ. ಹುಟ್ಟಿದ ಬೀಜ ಕಮರಿ ಹೋದರೂ, ಯಾರೂ ಕೇಳದ ಅರಣ್ಯರೋದನ. ಜಲಾಶಯದಲ್ಲಿ ನೀರಿನ ಸಂಗ್ರಹವಿದ್ದರೂ ಇನ್ನೊಂದು ವಾರ ನೀರು ಬಿಡಬಹುದಿತ್ತಾದರೂ ಯಾವ ಮಂತ್ರಿಗಳೂ ಆ ರೀತಿ ಆದೇಶಿಸಲಿಲ್ಲ. ದನಕರುಗಳಿಗೂ ಮೇವಿಲ್ಲ. ಸರ್ಕಾರ, ಸರ್ಕಾರಿ ನೌಕರರಿಗೆ ವೇತನ ಆಯೋಗಗಳನ್ನು ರಚಿಸುತ್ತಲೇ ಇದೆ. ರೈತ ಸಂಕಷ್ಟದಿಂದ ಸತ್ತರೂ ನೂರೆಂಟು ನೆಪ ಹೇಳಿ ಶವಸಂಸ್ಕಾರಕ್ಕೂ ನೆರವು ನೀಡದು. ಇದು ಯಾವ ಸೀಮೆಯ ನ್ಯಾಯವೋ!