ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡುತ್ತಿರುವ ಎಸ್.ಆರ್ ಹಿರೇಮಠ ಅವರ ವಿರುದ್ಧ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆ ಎಳೆದವರಿಗೆ ರಕ್ಷಣೆ ನೀಡಲು ಕೇಂದ್ರ ಸರ್ಕಾರ ‘WHISTLE BLOWER (protection) ACT’ ತಂದಿದೆ. ಈ ಕಾಯ್ದೆ ಪ್ರಕಾರ, ಸರ್ಕಾರವೇ ಭದ್ರತೆ ನೀಡಿ ಅಂತಹ ವ್ಯಕ್ತಿಗಳಿಗೆ ಯಾವುದೇ ಬೆದರಿಕೆ ಇಲ್ಲದಂತೆ ನೋಡಿಕೊಳ್ಳಬೇಕಾಗುತ್ತದೆ.
ಟಪಾಲ್ ಗಣೇಶ ಎಂಬ ವ್ಯಕ್ತಿ ಈ ಮೊದಲು ಗಾಲಿ ಜನಾರ್ದನ ರೆಡ್ಡಿ ಅವರ ಅಕ್ರಮದ ವಿರುದ್ಧ ಹೇಳಿಕೆ ನೀಡಿ ಪ್ರಚಾರ ಪಡೆದಿದ್ದರು. ಸ್ವತಃ ಗಣಿ ಉದ್ಯಮಿಯಾಗಿ ಇಡೀ ಗಣಿಗಾರಿಕೆ ಮುಚ್ಚಬೇಕು ಎನ್ನುತ್ತಿದ್ದಾಗ ಅವರ ಕುರಿತು ಆಗಲೇ ಅನೇಕರಿಗೆ ಸಂಶಯ ಮೂಡಿತ್ತು. ಈಗ ಸಚಿವ ಸಂತೋಷ ಲಾಡ್ ಅವರು ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದಲ್ಲಿ ಸಿಲುಕಿದಾಗ ಗಣೇಶ್ ಏಕಾಏಕಿ ಹಿರೇಮಠರ ವಿರುದ್ಧ ಸರ್ಕಾರಕ್ಕೆ ದೂರು ನೀಡಿದ್ದಾರೆ. ಈ ಬೆಳವಣಿಗೆಯಿಂದ ಗಣೇಶ್ ಕುರಿತು ಸಾರ್ವಜನಿಕರಲ್ಲಿ ಸಂದೇಹ ಉಂಟಾಗಿದೆ. ಇಂತಹ ವ್ಯಕ್ತಿ ಕೊಟ್ಟ ದೂರನ್ನು ಆಧರಿಸಿ ಹಿರೇಮಠರ ವಿರುದ್ಧ ತನಿಖೆಗೆ ಮುಂದಾಗಿರುವುದು Whistle Blowers Act ಸ್ಪಷ್ಟ ಉಲ್ಲಂಘನೆಯಾಗಿದೆ.
೨೦೦೩ರ ನವೆಂಬರ್ನಲ್ಲಿ ಸುವರ್ಣ ಚತುಷ್ಪಥ ರಸ್ತೆ ನಿರ್ಮಾಣದ ಹಗರಣವನ್ನು ಬಯಲಿಗೆಳೆದ ಸತ್ಯೇಂದ್ರಕುಮಾರ್ ದುಬೆ ಅವರ ಹತ್ಯೆಯಾಗಿತ್ತು. ಆಗಿನಿಂದ ಈ ಕಾಯ್ದೆ ಹೆಚ್ಚು ಚಾಲ್ತಿಯಲ್ಲಿದೆ. ಯಾವುದೇ ಭದ್ರತೆಯಿಲ್ಲದೇ ಮಹಾರಾಷ್ಟ್ರದಲ್ಲಿ ವಾಮಾಚಾರದ ವಿರುದ್ಧ ಹೋರಾಡುತ್ತಿದ್ದ ದಾಭೋಲ್ಕರ ಹತ್ಯೆಯ ಸಮಯದಲ್ಲೂ ಕೂಡ ಸಾಮಾಜಿಕ ಹೋರಾಟಗಾರರಿಗೆ ಸರ್ಕಾರದಿಂದ ಭದ್ರತೆ ನೀಡುವ ಕುರಿತು ಚರ್ಚೆ ನಡೆದಿತ್ತು. ಎಸ್. ಆರ್. ಹಿರೇಮಠರ ವಿರುದ್ಧ ಸರ್ಕಾರ ತನಿಖೆಗೆ ಮುಂದಾಗಿರುವುದನ್ನು ಎಲ್ಲರೂ ವಿರೋಧಿಸಬೇಕಿದೆ.