ಸಿದ್ದರಾಮಯ್ಯ ಅವರ ಸರ್ಕಾರ ಅದ್ದೂರಿಯಾಗಿ ನಡೆಯುವ ಮದುವೆಗಳಿಗೆ ತೆರಿಗೆಯನ್ನು ವಿಧಿಸಲು ಯೋಚಿಸುತ್ತಿರುವುದು ಅದರ ಎಲ್ಲಾ 'ಭಾಗ್ಯ' ಯೋಜನೆಗಳಂತೆ ವ್ಯಾಪಕ ಅನುಮಾನಗಳನ್ನು ಸೃಷ್ಟಿಸುತ್ತಿದೆ. ಮದುವೆ ಹೆಸರಿನಲ್ಲಿ ಆಡಂಬರದ ಪ್ರದರ್ಶನ ಸಹನೀಯವಲ್ಲ, ಆದರೆ ಅದನ್ನು ನಿಯಂತ್ರಿಸಲು ಸರ್ಕಾರದ ಈ ತೆರಿಗೆ ಹೇರುವ ಕ್ರಮಗಳು ಎಷ್ಟು ಪ್ರಾಯೋಗಿಕ ಎನ್ನುವುದನ್ನು ಪ್ರಾಜ್ಞರು ತಿಳಿಸಬೇಕು.
ವೆಚ್ಚಗಳ ಮೇಲೆ ಹಾಕುವ ತೆರಿಗೆಯು ಯಾವಾಗಲೂ ಆರ್ಥಿಕ ವ್ಯವಸ್ಥೆಯ ಹಣದ ಹರಿವನ್ನು ತಗ್ಗಿಸುತ್ತದೆ ಎಂಬುದು ಹಲವಾರು ಬಾರಿ ಆಯವ್ಯಯ ಮಂಡಿಸಿರುವ ಸಿದ್ದರಾಮಯ್ಯನವರ ಬೌದ್ಧಿಕ ವ್ಯಾಪ್ತಿಗೆ ನಿಲುಕದ ವಿಷಯವೇನಲ್ಲ. ಇನ್ನು ಇಂತಹ ಕಾನೂನುಗಳು ರಚನೆಯಾದರೆ ಅದನ್ನು ತಪ್ಪಿಸಿಕೊಳ್ಳಲು ಅದರ ಚಾಪೆಯಡಿಯಲ್ಲಿಯೇ ನುಸುಳುವ ವಿದ್ಯೆ ನಮ್ಮ ಜನಗಳಿಗೆ ಕರತಲಾಮಲಕ ವಾಗಿರುತ್ತದೆ.
ಈ ಕಾನೂನನ್ನು ಜಾರಿಗೊಳಿಸುವ ಇಲಾಖೆಯನ್ನು ಮತ್ತಷ್ಟು ಭ್ರಷ್ಟಗೊಳಿಸಲು ಇದು ದಾರಿಯಾಗುತ್ತದೆ. ಅಲ್ಲದೆ ಕಲ್ಯಾಣ ಮಂದಿರಗಳ ಮೇಲೆ ಈಗಾಗಲೇ ತೆರಿಗೆಯನ್ನು ರಾಜ್ಯ ಸರ್ಕಾರ ವಿಧಿಸುತ್ತಿದೆ. ವೈಭವದ ಮದುವೆ ಮಾಡುವವರೆಲ್ಲರೂ ಅಕ್ರಮವಾಗಿಯೇ ಹಣ ಸಂಪಾದಿಸಿರುತ್ತಾರೆ. ಆದ್ದರಿಂದ ಅದರಲ್ಲಿ ಸರ್ಕಾರಕ್ಕೂ ಒಂದಷ್ಟು ಬರಲಿ ಅದನ್ನು ಸರ್ಕಾರ ಬೇರೆ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಿದರೆ ಏನು ತಪ್ಪು ಎಂಬ ವಾದಸರಣಿ ಪೂರ್ವಗ್ರಹ ಪೀಡಿತ ಎನ್ನಿಸುತ್ತದೆ.
ಕರೆಯುವ ಹಸುವನ್ನು ಇನ್ನಷ್ಟು ಹಿಂಡಿ ಜಾಸ್ತಿ ಹಾಲು ಕರೆಯಬಹುದು ಎಂಬ ನಿರ್ಧಾರಗಳು ಸರ್ಕಾರದ ಹುಂಬತನಕ್ಕೆ ಸಾಕ್ಷಿ.