ಬೆಳಕಿನ ಹಬ್ಬಕ್ಕೆ ಇನ್ನು ಕೆಲವೇ ಕೆಲವು ದಿನಗಳು ಉಳಿದಿವೆ. ಬೆಳಕಿನ ಹಬ್ಬ ಅಂದರೆ ಪಟಾಕಿ, ಸಿಹಿ ಊಟ, ಲಕ್ಷ್ಮಿ ನೋಂಪಿ (ಪೂಜೆ) ಮುಂತಾದುವುಗಳ ನೆನಪಿನ ನಲಿವಿನ ಒಸಗೆ. ನಾವು ಅದನ್ನು ಬೆಳಕಿನ ಹಬ್ಬ, ದೀಪಾವಳಿ ಅಂತ ಕರೆಯುತ್ತೇವೆ.
ಇದು ಒಂದೆಡೆ. ಆದರೆ ಇತ್ತೀಚೆಗೆ ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಎಂಟು ಸಂಪುಟದ ಪದಕೋಶದಲ್ಲಿ ಎಂಟನೆಯ ಸಂಪುಟ ನೋಡುತ್ತಿರುವಾಗ ಅದರಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಇನ್ನೊಂದು ಪದ ಸಿಕ್ಕಿತು. ಅದು `ಸೊಡರುಹಬ್ಬ~ ಅಂತ. ನಮ್ಮೆಲ್ಲರಿಗೂ ಗೊತ್ತು ಸೊಡರು ಅಂದರೆ ದೀಪ ಅಂತ. `ಸೊಡರು ಹಬ್ಬ~ ಅಂದರೆ `ದೀಪಗಳ ಹಬ್ಬ~ ಇಲ್ಲವೇ ದೀಪಾವಳಿ ಅಂತ ಇತ್ತು. ಪದದ ಜೊತೆಗೆ ಅದರ ಬಳಕೆ ಕೂಡ ಆಗಿತ್ತು.
ಬಳಕೆ ಹೀಗಿದೆ :- ಪಟ್ಟಣದಲ್ಲಿ ಬಂಡಿಬಂಡಿಯಿಂದ ಸಕ್ಕರೆ ಹಂಚಿದರು ಊರಲೆಲ್ಲ ಸೊಡರುಹಬ್ಬವಾಯಿತು. (ಬೀರಬಲ್ಲನ ಚರಿತ್ರೆ, ರಾಮಚಂದ್ರ ಹಣಮಂತ ದೇಶಪಾಂಡೆ, 1923, ಮಾಳಮಡ್ಡಿ, ಧಾರವಾಡ ). ನನಗೆ ಇದು ನಲಿವು ತಂದಿತ್ತು.
ಯಾಕೆಂದರೆ ಕನ್ನಡ ನುಡಿ ನಮ್ಮ ಹೆಮ್ಮೆಯ ನುಡಿಯಲ್ಲಿ ಇಂಥ ಪದಗಳಿವೆ. ಆದರೆ ಹಲವು ದೂಸರುಗಳಿಂದ ( ಕಾರಣಗಳಿಂದ ) ಈ ಪದದ ಬಳಕೆ ಜಾರಿ ತಪ್ಪಿ ಹೋಗಿದೆ. ಆದರೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಕೋಶದಲ್ಲಿ ಈ ಪದ ಇದೆ. ಸಾಹಿತ್ಯ ಪರಿಷತ್ತು ಎಂಟು ಸಂಪುಟಗಳ ಮರು ಅಚ್ಚು ತುಂಬಾ ಒಳಿತು.
ಯಾಕೆಂದರೆ ನನಗೆ ಹೀಗೆ ಈಗಿನ ಕನ್ನಡದಲ್ಲಿ ಬಳಕೆ ತಪ್ಪಿದ ಒಂದು ಒಳ್ಳೆಯ ಕನ್ನಡ ಪದ ಸಿಕ್ಕಿತು. ಹೀಗೆ ಕನ್ನಡದಲ್ಲಿ ತುಂಬಾ ಒಳ್ಳೆ ಪದಗಳಿದ್ದರೂ ಅದರ ಬಳಕೆ ಈಗ ಆಗುತ್ತಿಲ್ಲ. ಕನ್ನಡ ನುಡಿಯ ಹಿರಿಮೆ, ಪೆಂಪು ತುಂಬಾ ದೊಡ್ಡದು. ಕನ್ನಡ ನುಡಿಯ ಬಳಕೆ, ಉಳಿಕೆ ಹಾಗೂ ಬೆಳವಣಿಗೆಗೆ ನಾವೆಲ್ಲರೂ ಹೊಣೆ, ಇದು ನಮ್ಮ ನುಡಿ.
ಹೀಗೆ ಕನ್ನಡದ ಹಲವು ಬಳಕೆ ತಪ್ಪಿದ ಪದಗಳು ನಾವು ಮರುಬಳಕೆಗೆ ತರಬೇಕು. ಅದರಲ್ಲಿ ಮಾಧ್ಯಮದವರ ಪಾಂಗು ( ಪಾತ್ರ ) ಇದೆ. ಅದು ಆದರೆ ಕನ್ನಡ ನುಡಿಯ ಆಳ, ಅಗಲ ನಮ್ಮ ಮಂದಿಯನ್ನು ಬೆರಗಾಗಿಸುವುದರಲ್ಲಿ ಎರಡು ಮಾತಿಲ್ಲ.