ಕನ್ನಡದ ಹಿರಿಯ ವಿದ್ವಾಂಸರಾಗಿದ್ದ ಪ್ರೊ. ಎಸ್. ಆರ್. ಮಳಗಿ ಅವರು ‘ಇನ್ನಿಲ್ಲ’ ಎಂದು ತಿಳಿದು ವಿಷಾದ ಆಯಿತು. (ಪ್ರ. ವಾ. ಡಿ. 25) ಸುಮಾರು 40 ವರ್ಷಗಳ ಹಿಂದಿನ ನೆನಪು. ನಾನು ಸೆಂಟ್ರಲ್ ಕಾಲೇಜಿಗೆ ಕನ್ನಡ ಆನರ್ಸ ತರಗತಿಗೆ ಸೇರಲು ಅರ್ಜಿ ಹಾಕಿದ್ದೆ. ಆಗ ಎಸ್. ಆರ್. ಮಳಗಿ ಅವರು ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. ಪ್ರವೇಶದ ಬಗ್ಗೆ ವಿಚಾರಿಸಲು ಅವರನ್ನೂ ಆಗಾಗ್ಗೆ ನೋಡಲು ಹೋಗುತ್ತಿದ್ದೆ.
ಫುಲ್ ಕಾಟನ್ ಸೂಟ್ – ಟೈ; ಸಪೂರ ವ್ಯಕ್ತಿ. ಮೆಲು ಮಾತು. ನಾನು ಮೊದಲು ನೋಡಿದಾಗ ಕಟ್ಟೀಮನಿಯವರ ‘ಮಾಡಿ – ಮಡಿದವರು’ ಕಾದಂಬರಿಯನ್ನು ಓದುತ್ತಿದ್ದರು. ಅವರಿಗೆ ಚಹದ ಚಟ ಬಹಳ. ಗಂಟೆಗೊಮ್ಮೆ ಚಹಕ್ಕೆ ಪಕ್ಕದಲ್ಲಿದ್ದ ಕ್ಯಾಂಟೀನಿಗೆ ಹೋಗುತ್ತಿದ್ದರು! ನಾನು ಒಂದು ಸಾರಿ: ‘ಸರ್, ಆಗಲೇ ಬಂದಿದ್ದೆ, ತಾವು ಇಲ್ಲಿರಲಿಲ್ಲ’ ಎಂದೆ. ಅದಕ್ಕವರು ‘ಇಲ್ಲಿ ಇಲ್ಲದಿದ್ದರೆ, ಕ್ಯಾಂಟೀನಿನಲ್ಲಿರುತ್ತೇನೆ’ – ಎಂದದ್ದು ಇಂದಿಗೂ ನೆನಪಿನಲ್ಲಿದೆ.