ಇತ್ತೀಚಿಗೆ ಕೋಲಾರದಲ್ಲಿ ನಡೆದ ಒಂದು ದಲಿತ ಸಭೆಯಲ್ಲಿ ಸುಮಾರು ೨೦೦ ಜನ ಸೇರಿದ್ದರು. ‘ನಿಮ್ಮೂರಿನ ದೇವಾಲಯಗಳಲ್ಲಿ ನಿಮಗೆ ಪ್ರವೇಶ ಸಿಕ್ಕಿದೆಯೇ?’ ಎಂದು ಕೇಳಿದೆ. ಕೆಲವೇ ಮಂದಿ ‘ಹೌದು’ ಎಂದರು. ಬಹುತೇಕ ಹಳ್ಳಿಯವರು ‘ಇಂದಿಗೂ ನಾವು ದೇವಾಲಯ ಪ್ರವೇಶಿಸುವಂತಿಲ್ಲ ‘ಎಂದರು. ‘ಪ್ರವೇಶವಿದೆ’ ಎಂದವರು ಪಟ್ಟಣಗಳಿಗೆ ಸೇರಿದವರು ಮತ್ತು ದಲಿತರೇ ಬಹುಸಂಖ್ಯೆಯಲ್ಲಿರುವ ಗ್ರಾಮಗಳಿಗೆ ಸೇರಿದವರು.
ರಾಷ್ಟ್ರದಲ್ಲಿ ಸಂವಿಧಾನ ಜಾರಿಯಾದ ಮೇಲೆ ಅಸ್ಪೃಶ್ಯತೆ ಮಾಯವಾಗಿದೆ ಎಂದು ಹೇಳಿ ಕಣ್ಣು ಮುಚ್ಚಿಕೊಂಡಿರುವವರಿಗೆ ಇದೆಲ್ಲ ಹೇಗೆ ಕಾಣಲು ಸಾಧ್ಯ? ದೂರದ ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿ ಕೊನೆಗೊಂಡಿದೆ. ಕರಿಯರಿಗೆ ಸಮಾನತೆ ಪ್ರಾಪ್ತವಾಗಿದೆ. ಆದರೆ ಸ್ವತಂತ್ರ ಭಾರತದಲ್ಲಿ ಅಸ್ಪೃಶ್ಯತೆಯನ್ನು ಇದುವರೆವಿಗೂ ಕೊನೆಗೊಳಿಸಲು ಸಾಧ್ಯವಾಗಿಲ್ಲ ಎಂಬುದನ್ನು ಮರೆಯಲಾದೀತೆ?
ಈ ದೇವಾಲಯ ನಮ್ಮದೆಂದು ಹೇಳಿಕೊಳ್ಳುವುದು ಭಾರತದಲ್ಲಿ ಇಂದಿಗೂ ಪ್ರತಿಯೊಬ್ಬ ಗ್ರಾಮಸ್ಥರಿಗೂ ಸಾಧ್ಯವಾಗುವುದಿಲ್ಲವೇಕೆ? ದೇವರ ಉತ್ಸವಕ್ಕೆ ದಲಿತರು ದುಡಿಯುವುದಿಲ್ಲವೇ? ತಮಟೆಗಳ ನಿನಾದದಲ್ಲಿ ಊರವರು ಕುಣಿಯುವುದಿಲ್ಲವೇ? ಎಲ್ಲದಕ್ಕಿಂತ ಮುಖ್ಯವಾಗಿ ದಲಿತರು ಮನುಷ್ಯರಲ್ಲವೇ?