ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆಯಾದ ಜಾತಿ ಗಣತಿಯನ್ನು ವಿರೋಧಿಸಿ ವೀರಶೈವ ಮಹಾಸಭಾ ತೆಗೆದುಕೊಂಡಿರುವ ನಿರ್ಣಯ ಆರೋಗ್ಯದಾಯಕವಾದದ್ದಲ್ಲ. ಇದು ಮಹಾಸಭಾದ ಸಂಕುಚಿತ ದೃಷ್ಟಿಯನ್ನು ಸಾರಿ ಹೇಳುತ್ತಿರುವಂತಿದೆ. ಈ ಕಿರು ಸಂದಿನ ನೋಟವನ್ನು ವಿಸ್ತರಿಸಿಕೊಂಡು ನೋಡಿದಾಗ ಮಾತ್ರ ಜಾತಿಗಣತಿಯ ಪ್ರಾಮುಖ್ಯ ಎಷ್ಟೆಂದು ಅದಕ್ಕೆ ಮನವರಿಕೆಯಾದೀತು. ಜಾತಿಯ ಇಕ್ಕಟ್ಟಿನಲ್ಲಿ ಕುಳಿತವರಿಗೆ ಈ ಸೂಕ್ಷ್ಮಗಳು ತಿಳಿಯುವುದು ಕಷ್ಟ.
ಲಿಂಗಾಯತ ಜಾತಿಯ ವಿವಿಧ ಉಪ ಪಂಗಡಗಳ ಜನರು ತಮ್ಮ ಉಪ ಪಂಗಡಗಳ ಹೆಸರನ್ನೇ ನಮೂದಿಸಬಹುದು, ಇದರಿಂದ ಸಮುದಾಯದ ಜನಸಂಖ್ಯೆ ಕಡಿಮೆ ಇರುವಂತೆ ವರದಿಯಲ್ಲಿ ದಾಖಲಾಗಬಹುದು ಎಂಬ ಮಹಾಸಭಾದ ಆತಂಕದಲ್ಲಿ ಹುರುಳಿಲ್ಲ. ಒಂದು ವೇಳೆ ಆ ಸಮುದಾಯದವರು ಹಾಗೆ ನಮೂದಿಸಿದರೂ; ಉದಾಹರಣೆಗೆ ಅವರು ಲಿಂಗಾಯತ/ ಗಾಣಿಗ, ಲಿಂಗಾಯತ/ ಸಿಂಪಿಗ, ಲಿಂಗಾಯತ/ಪಂಚಮಸಾಲಿ ಇತ್ಯಾದಿ ಬರೆಸಿದರೂ ಆತಂಕಪಡುವ ಅಗತ್ಯವೇನೂ ಇರಲಾರದು.
ಅವರು ಲಿಂಗಾಯತ ಅಲ್ಪಸಂಖಾತರೆಂದು ಮುಂದೆ ಪರಿಗಣಿತರಾಗಿ ಮೀಸಲು ಸೌಲಭ್ಯಕ್ಕೂ ಅರ್ಹರಾಗಬಹುದಲ್ಲವೇ? ಇಂಥ ಯಾವುದೇ ಆಲೋಚನೆಯಿಲ್ಲದೆ ಮಹಾಸಭಾ ಸಾರಾಸಗಟು ನಿರ್ಣಯ ತೆಗೆದುಕೊಳ್ಳುವುದು ವೀರಶೈವ ತಾತ್ವಿಕತೆಯ ಬಗೆಗಿನ ಅದರ ಅಜ್ಞಾನವನ್ನು ತೋರುತ್ತದಲ್ಲದೆ ಬೇರೇನೂ ಅಲ್ಲ.
ಈಗಿರುವ ಲಿಂಗಾಯತರೆಲ್ಲರೂ ಬಸವಣ್ಣನಿಗೂ ಮುಂಚೆ ತಳಸಮುದಾಯದ ಕಸುಬುದಾರರಾಗಿದ್ದರು ಎಂಬ ಸರಳ ತಿಳಿವಳಿಕೆ ಮಹಾಸಭಾಕ್ಕೆ ಇದ್ದರೆ ಸಾಕು ತನ್ನ ಈಗಿನ ತೀರ್ಮಾನವನ್ನು ಬದಲಿಸಿಕೊಂಡು ಜಾತಿಗಣತಿ ಸರಾಗವಾಗಿ ನಡೆಯಲು ಅನುವು ಮಾಡಿಕೊಡಬಲ್ಲದು.