ಇತ್ತೀಚೆಗೆ ಹೆಸರಾಂತ ಗಣಪತಿ ದೇವಸ್ಥಾನವೊಂದಕ್ಕೆ ಹೋಗಿದ್ದೆ. ಸಂಕಷ್ಟಹರ ದಿನವಾದುದರಿಂದ ಎಲ್ಲಿ ಕಂಡರೂ ಜನವೋ ಜನ. ಕಷ್ಟಪಟ್ಟು ದೇವಸ್ಥಾನ ಪ್ರವೇಶಿಸಿದರೆ ಸರತಿ ಸಾಲು ಮುಂದಕ್ಕೇ ಹೋಗುತ್ತಿಲ್ಲ. ಕಾರಣ ಎಲ್ಲರ ಮೊಬೈಲ್ ಗೀಳು.
ಒಳಸುತ್ತಿನ ಜಗಲಿಯಲ್ಲಿ ಕೂತು ಕಾಲು ಕೆಳಬಿಟ್ಟು ಮೊಬೈಲ್ನಲ್ಲಿ ಹರಟುವವರು ಕೆಲವರಾದರೆ ಪ್ರದಕ್ಷಿಣೆ ಹಾಕುತ್ತ ಮೊಬೈಲ್ನಲ್ಲಿ ಬೊಬ್ಬೆ ಹೊಡೆಯುವವರು ಹೆಚ್ಚಿನವರು. ಗರ್ಭಗುಡಿಯ ಸುತ್ತ ಮೊಬೈಲ್ ವಾತಾವರಣ. ಭಕ್ತನ ಮೊರೆ ದೇವರಿಗೂ ಕೇಳಿಸದ ಪರಿಸ್ಥಿತಿ.
ಮೊಬೈಲ್ ನಿಶ್ಶಬ್ದವಾಗಿಡಿ ಎಂದು ಅಲ್ಲಲ್ಲಿ ಫಲಕ ಹಾಕಿದ್ದರೂ, ದೇವರ ದರ್ಶನಕ್ಕಾಗಿ ಬಂದಿದ್ದರೂ, ಇತರ ಭಕ್ತಾದಿಗಳಿಗೆ ತೊಂದರೆಯಾಗುತ್ತದೆ ಎಂದು ಗೊತ್ತಿದ್ದರೂ ಕೆಲ ನಿಮಿಷಗಳ ಮಟ್ಟಿಗಾದರೂ ಮೊಬೈಲ್ಗೆ ರೆಸ್ಟ್ ಕೊಡಬಾರದೇಕೆ?