‘ಧರ್ಮಕ್ಕಿಂತ ಮಾನವೀಯತೆ ದೊಡ್ಡದು’ ಎಂದು ಹೇಳಿರುವ ಅರೇಬಿಯಾದ ಮೆಕ್ಕಾ ಮಸೀದಿಯ ಇಮಾಂ ಹಾಗೂ ಮುಸ್ಲಿಂ ಧರ್ಮಗುರು ಡಾ. ಸಾಲೇಹ ಬಿನ್ ಮಹಮ್ಮದ್ ಇಬ್ರಾಹಿಂ ಅಲ್ ತಾಲೇಬ್ ಅವರ ಮಾತುಗಳನ್ನು (ಪ್ರ.ವಾ., ಏ. 10) ಇಡೀ ಮುಸ್ಲಿಂ ಸಮುದಾಯ ಗಂಭೀರವಾಗಿ ಪರಿಗಣಿಸುತ್ತದೆ ಎಂಬುದು ನನ್ನ ಭಾವನೆ.
ಜಗತ್ತಿನಾದ್ಯಂತ ಧಾರ್ಮಿಕ ಮೂಲಭೂತವಾದ ತೀವ್ರವಾಗಿರುವ ಈ ಸಂದರ್ಭದಲ್ಲಿ ಹಾಗೂ ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಅಸಹನೆ, ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ನಂಬಲಾಗುತ್ತಿರುವ ಈ ಹೊತ್ತಿನಲ್ಲಿ ಮೇಲಿನ ಮಾತು ಅತ್ಯಂತ ಮೌಲಿಕವಾದುದು.
ಆಯಾ ಧರ್ಮದ ಗುರುಗಳು ಅವರವರ ಧರ್ಮವೇ ಶ್ರೇಷ್ಠ ಎನ್ನುವ ಸಂಕುಚಿತ ಅರ್ಥದಲ್ಲಿ ಮಾತನಾಡದೆ, ಈ ರೀತಿಯ ಪರಧರ್ಮ ಸಹಿಷ್ಣುತೆ ಮೂಡಿಸುವ ದಿಸೆಯಲ್ಲಿ ಮಾತನಾಡಿದರೆ, ಜಾತಿ, ಧರ್ಮಗಳ ನಡುವಿನ ಕಂದಕ, ಸಂಘರ್ಷ, ಅಸಹಿಷ್ಣುತೆ, ಪೂರ್ವಗ್ರಹಗಳು ಕ್ಷೀಣಿಸಿ ಸಮಾಜದಲ್ಲಿ ಶಾಂತಿ, ವಿಶ್ವಭ್ರಾತೃತ್ವ ಭಾವನೆ ಮೂಡುತ್ತದೆ. ಆರೋಗ್ಯಕರ ಸಮಾಜ ನಮ್ಮದಾಗುತ್ತದೆ. ಮಾಧ್ಯಮಗಳೂ ಧರ್ಮಗಳನ್ನು ಮೀರಿದ ಹೇಳಿಕೆಗಳಿಗೆ ಒತ್ತು ನೀಡಬೇಕು.