ಕೃಷಿ ಭೂಮಿಯ ಭೋಗ್ಯವನ್ನು ಕಾನೂನುಬದ್ಧಗೊಳಿ ಸಲು ಕೇಂದ್ರ ಸರ್ಕಾರ ಮಸೂದೆ ತರಲು ಸಿದ್ಧತೆ ನಡೆಸುತ್ತಿರುವುದು (ಪ್ರ.ವಾ., ಜ. 11) ಕಳವಳಕಾರಿ ವಿಚಾರ. ಸಣ್ಣ ರೈತರಿಗೆ ಅನುಕೂಲ ಕಲ್ಪಿಸುವ ಮಾತುಗಳೊಂದಿಗೆ ಈಗಾಗಲೇ ಕಾಂಟ್ರ್ಯಾಕ್ಟ್ ಫಾರ್ಮಿಂಗ್ ಮೂಲಕ ಅಗ್ರಿಬಿಸಿನೆಸ್ನಲ್ಲಿ ತೊಡಗಿಕೊಂಡಿರುವ ದೊಡ್ಡ ದೊಡ್ಡ ಕಂಪೆನಿಗಳು ಹೊಸದಾಗಿ ತೊಡಗಲು ಭಾರೀ ಯೋಜನೆಗಳೊಂದಿಗೆ ಸನ್ನದ್ಧಗೊಂಡಿವೆ. ಇವುಗಳಿಗೆ ಬಡ ರೈತರ ಭೂಮಿಯನ್ನು ಅಧಿಕೃತವಾಗಿ ವಶಪಡಿಸಿಕೊಳ್ಳುವ ಹಕ್ಕನ್ನು ಕಲ್ಪಿಸಿಕೊಡುವ ಸಂಚು ಈ ಮಸೂದೆಯ ಹಿಂದೆ ಇರಬಹುದು.
ವಾಸ್ತವವಾಗಿ ಸಣ್ಣ ಕೃಷಿಕರಿಗೆ ಸಬ್ಸಿಡಿ ರಸಗೊಬ್ಬರ, ಬೀಜ, ಬೆಳೆವಿಮೆ, ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಇತ್ಯಾದಿ ಸೌಲಭ್ಯಗಳು ಅಲಭ್ಯವಾಗುತ್ತಿರುವುದರ ಹಿಂದೆ ಡಬ್ಲ್ಯುಟಿಒ ಆಣತಿಗೆ ತಕ್ಕಂತೆ ಕೃಷಿ ನೀತಿಯನ್ನು ನಿರ್ವಹಿಸುತ್ತಿರುವುದು ಕಾರಣ. ನಮ್ಮ ಕೃಷಿ ಕ್ಷೇತ್ರದ ಈ ಹೊತ್ತಿನ ದೌರ್ಭಾಗ್ಯಕ್ಕೆ ಮಾರುಕಟ್ಟೆ ಶಕ್ತಿಗಳೇ ಕಾರಣ ಎಂಬುದು ನಿರ್ವಿವಾದ. ಉದ್ದೇಶಿತ ಮಸೂದೆಯು ಸಣ್ಣ ರೈತರಿಗೆ ಲಾಭ ಮಾಡಿಕೊಡುತ್ತದೆ ಎಂಬುದಕ್ಕೆ ಯಾವ ಖಾತರಿಯೂ ಇಲ್ಲ.