ಸ್ವಯಂ ಘೋಷಿತ ದೇವಮಾನವರು ತಮ್ಮ ಕುಕೃತ್ಯಗಳಿಂದಾಗಿ ಜೈಲು ಸೇರುತ್ತಿದ್ದಾರೆ. ವಿಪರ್ಯಾಸವೆಂದರೆ, ಅಸಾರಾಮ್ ಬಾಪು ಜೈಲಿನಲ್ಲಿದ್ದರೂ ರಾಜಸ್ತಾನ ಸರ್ಕಾರ ಈತನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿದೆ. ಒಡಿಶಾದ ಸ್ವಯಂ ಘೋಷಿತ ದೇವಮಾನವ ಸಾರಥಿ ಬಾಬಾನನ್ನು ವೇಶ್ಯಾವಾಟಿಕೆ, ಮೋಸ ಮತ್ತು ವಂಚನೆ ಕಾರಣಕ್ಕಾಗಿ ಪೊಲೀಸರು ಬಂಧಿಸಿದ್ದಾರೆ.
ಬಾಬಾನ ವಿಕೃತ ಚಟುವಟಿಕೆಗಳ ವಿರುದ್ಧ ಜನ ಪ್ರತಿಭಟಿಸಿದ ನಂತರ ಈತನನ್ನು ಬಂಧಿಸಿ, ಆಶ್ರಮವನ್ನೆಲ್ಲ ಶೋಧಿಸಿ ಪ್ರಕರಣ ದಾಖಲಿಸಲಾಗಿದೆ. ಈಗ ಸ್ವಯಂಘೋಷಿತ ದೇವಮಹಿಳೆ ರಾಧೆಮಾ ಕಾಣಿಸಿಕೊಂಡಿದ್ದಾಳೆ. ಮುಂಬಯಿ ಮೂಲದ ವಕೀಲರೊಬ್ಬರು ರಾಧೆಮಾ ವಿರುದ್ಧ ಅರೆಬೆತ್ತಲೆ, ಅಶ್ಲೀಲ ವರ್ತನೆ ಹಾಗೂ ವಂಚನೆ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ.
ಇಷ್ಟೆಲ್ಲ ಆಗುತ್ತಿದ್ದರೂ ಲಕ್ಷಾಂತರ ಜನ ಇಂಥ ಢೋಂಗಿ ಬಾಬಾಗಳನ್ನು ನಂಬುತ್ತಿದ್ದಾರೆ. ಜನರ ಮುಗ್ಧತೆಯನ್ನು ಬಂಡವಾಳವಾಗಿಸಿಕೊಂಡು ದೇವಮಾನವರೆಲ್ಲ ಕೋಟ್ಯಂತರ ರೂಪಾಯಿ ಆಸ್ತಿ ಮಾಡಿಕೊಂಡು ವಿಲಾಸಿ ಜೀವನ ನಡೆಸುತ್ತಿದ್ದಾರೆ. ಭಜನೆ, ಹಾಡು, ಕುಣಿತದ ಮೂಲಕ ಸಮೂಹ ಸನ್ನಿಗೆ ನೂಕುವ ಹಾಗೂ ದೇವಮಾನವ, ದೇವಮಹಿಳೆಯರನ್ನು ಸೃಷ್ಟಿಸುವ ಹಿಂಬಾಲಕರ ಗಾಳಕ್ಕೆ ಜನ ಮರುಳಾಗದೆ ಎಚ್ಚರ ವಹಿಸಬೇಕಾಗಿದೆ.