ಮಕ್ಕಳ ಹಾಜರಾತಿ ಸಂಖ್ಯೆ ಇಳಿಮುಖವಾಗಿರುವುದನ್ನು ಗಮನಿಸಿ, ಶಿಕ್ಷಣಾಧಿಕಾರಿಗಳು ಶಿಕ್ಷಕರ ಹೆಚ್ಚುವರಿ ಪಟ್ಟಿಯನ್ನು ತಯಾರಿಸಿ ಶಿಕ್ಷಕರ ವರ್ಗಾವಣೆ ಕ್ರಮಕ್ಕೆ ಮುಂದಾಗಿದ್ದಾರೆ. ಇದು ಸರ್ಕಾರ ಕೈಗೊಳ್ಳಬೇಕಾದ ಸೂಕ್ತ ಕೆಲಸ. ಯಾಕೆಂದರೆ, ಮಕ್ಕಳೇ ಇಲ್ಲದೆ ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರ ಅಗತ್ಯವಾದರೂ ಏನಿದೆ?
ಆದರೆ, ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆಯವರು, ಈ ಪ್ರಕ್ರಿಯೆ ಅವೈಜ್ಞಾನಿಕವಾದದ್ದು, ಇದನ್ನು ತಕ್ಷಣ ಕೈ ಬಿಡಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಶಾಲಾ ಎಸ್ಡಿಎಂಸಿ ಅಧ್ಯಕ್ಷರು ಸಹ ಇಂಥ ಪ್ರತಿಭಟನೆಗಳನ್ನು ಮಾಡಿದ ವರದಿಗಳಿವೆ. ಹೆಚ್ಚುವರಿಯನ್ನು ವಿರೋಧಿಸುವ ಕೆಲವು ಶಿಕ್ಷಕರು, ತಮ್ಮ ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಬಳಸಿಕೊಂಡ ಉದಾಹರಣೆಗಳಿವೆ.
ಸರ್ಕಾರಿ ಶಾಲೆಗಳೆಂದರೆ ನಗರಸಭೆಯ ಬೀದಿ ದೀಪಗಳೇ? ಅವುಗಳ ಮೇಲೆ ಯಾವಾಗ ಯಾರು ಬೇಕಾದರೂ ಕಲ್ಲೆಸೆಯಬಹುದೇ? ಹೆಚ್ಚುವರಿಯಾಗಿರುವ ಸುದ್ದಿ ತಿಳಿದ ನೂರಾರು ಶಿಕ್ಷಕರು ಶಾಲೆ ಬಿಟ್ಟು ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿ ಮುಂದೆ ಇಡೀ ದಿನ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡದ್ದು ವರದಿಯಾಗಿದೆ.
ಶಿಕ್ಷಣಾಧಿಕಾರಿಗಳು ದಿಟ್ಟತನದಿಂದ, ನಿಷ್ಠುರ ಹಾಗೂ ನಿರ್ದಾಕ್ಷಿಣ್ಯವಾಗಿ ಯಾವ ಕ್ರಮವನ್ನೂ ಕೈಗೊಳ್ಳದ ಪರಿಸ್ಥಿತಿ ಗಟ್ಟಿಗೊಂಡಿದೆ. ಯಾಕೆಂದರೆ ಇಲ್ಲಿ ರಾಜಕೀಯ ಹಸ್ತಕ್ಷೇಪವೂ ಇದೆ. ಒಟ್ಟಾರೆ, ಸರ್ಕಾರಿ ಶಾಲೆಗಳು ಅಧೋಗತಿಯ ಹಾದಿಯಲ್ಲಿ ಸಾಗುತ್ತಿರುವುದು ಸತ್ಯ.