ಬೆಂಗಳೂರು ಜಿಲ್ಲೆ ಆನೇಕಲ್ ತಾಲ್ಲೂಕಿನ ಗಡಿಯ ಪಕ್ಕದ ತಮಿಳುನಾಡು ಪ್ರದೇಶದಲ್ಲಿ ಎಲ್ಲ ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚಿರುವ ಸಂಗತಿಯನ್ನು ಆ ಪ್ರದೇಶದವರೇ ಆದ ಅಪರಿಚಿತರು ನನಗೆ ತಿಳಿಸಿ, ವಿವರಿಸಿ ತಮ್ಮ ನೋವನ್ನು ಹಂಚಿಕೊಂಡರು.
ಗಡಿ ಪ್ರದೇಶದಲ್ಲಿ ನೂರಕ್ಕೆ ನೂರರಷ್ಟು ಕನ್ನಡ ಮಾತನಾಡುತ್ತಾರೆ. ಅವರು ತಮ್ಮ ಮಕ್ಕಳು ಕೆಳ ಹಂತದಲ್ಲಿ ಕನ್ನಡದಲ್ಲಿ ಶಿಕ್ಷಣ ಪಡೆಯುವುದನ್ನು ಅಪೇಕ್ಷಿಸುತ್ತಾರೆ. ಆದರೆ ತಮಿಳುನಾಡು ಸರ್ಕಾರ ಅವುಗಳನ್ನೆಲ್ಲ ತಮಿಳುಮಯ ಮಾಡಿರುವುದನ್ನು ಕರ್ನಾಟಕ ಸರ್ಕಾರವು ಗಂಭೀರವಾಗಿ ತೆಗೆದುಕೊಂಡು ತಮಿಳುನಾಡು ಸರ್ಕಾರದೊಂದಿಗೆ ಮಾತನಾಡಿ ಕನ್ನಡ ಶಾಲೆಗಳನ್ನು ಉಳಿಸಬೇಕೆಂದು ಒತ್ತಾಯಿಸುವ ಅಗತ್ಯವಿದೆ.
ಕೆಳ ಹಂತದ ಶಿಕ್ಷಣ ಮಾತೃಭಾಷೆಯಲ್ಲಿಯೇ ಇರಬೇಕೆಂದು ಕಾನೂನು ಹೇಳುತ್ತಿರುವಾಗ, ಕರ್ನಾಟಕ ಸರ್ಕಾರ ತಮಿಳು ಶಾಲೆಗಳಿಗೆ ಅವಕಾಶ ನೀಡಿರುವಾಗ, ತಮಿಳುನಾಡಿನ ದಬ್ಬಾಳಿಕೆಯ ನೀತಿ ಖಂಡನೀಯ. ಕರ್ನಾಟಕ ಸರ್ಕಾರ ಮೊದಲು ಮಾಡಬೇಕಾದುದು– ಒಂದು ನಿಯೋಗವನ್ನು ಕಳುಹಿಸಿ ಗಡಿಯ ಕನ್ನಡ ಶಾಲೆಗಳ ಸ್ಥಿತಿಗತಿಯನ್ನು ಅರಿಯುವುದು. ಕನ್ನಡ ಎಂದೂ ನೆರೆಹೊರೆಯ ಭಾಷೆಗಳಿಗೆ ಅನ್ಯಾಯ ಮಾಡಿಲ್ಲ. ಆದರೆ ನೆರೆ ರಾಜ್ಯಗಳ ಭಾಷೆಗಳು ಕನ್ನಡದ ಮೇಲೆ ನಿರಂತರ ದಬ್ಬಾಳಿಕೆ ಮಾಡಿವೆ, ಮಾಡುತ್ತಿವೆ ಎಂಬುದು ಒಂದು ಸ್ಪಷ್ಟ ಐತಿಹಾಸಿಕ ಸತ್ಯ.