ದೇಶ ಕಂಡ ಸಾತ್ವಿಕ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರ ಸರಳತೆ, ಪ್ರಾಮಾಣಿಕತೆ ಎಂಥವರಿಗೂ ಸ್ಫೂರ್ತಿ ನೀಡುತ್ತದೆ. ದೇಶದ ಎರಡನೇ ಪ್ರಧಾನ ಮಂತ್ರಿಯಾಗಿ ಶಿಸ್ತು, ಪ್ರಾಮಾಣಿಕತೆಗೆ ಆದ್ಯತೆ ಕೊಟ್ಟು ಇಡೀ ದೇಶವನ್ನೇ ಭ್ರಷ್ಟಾಚಾರ ಮುಕ್ತವನ್ನಾಗಿಸಲು ಪಣ ತೊಟ್ಟವರು ಅವರು.
ಅಕ್ಟೋಬರ್ 2 ಎಂದಾಕ್ಷಣ ನೆನಪಿಗೆ ಬರುವುದು ಮಹಾತ್ಮ ಗಾಂಧೀಜಿ. ಆದರೆ ಅದೇ ದಿನ ಶಾಸ್ತ್ರಿ ಅವರೂ ಜನಿಸಿದ್ದರು ಎಂಬುದು ಕೆಲವರಿಗೆ ತಿಳಿದಿಲ್ಲ. ಪ್ರಧಾನಿಯಾಗಿದ್ದಾಗಲೂ ಶಾಸ್ತ್ರಿ ಬಹಳ ಸರಳ ಜೀವನ ನಡೆಸುತ್ತಿದ್ದರು. ಸರಳತೆ ನಮ್ಮ ದೇಶದ ಉಚ್ಚ ಸಂಸ್ಕೃತಿಯ ಸಂಕೇತ, ಕೋಟಿ, ಕೋಟಿ ಭಾರತೀಯರಿಗೆ ಉಡಲು ಉತ್ತಮವಾದ ಉಡುಪಿಲ್ಲ, ಪ್ರಧಾನಿಯಾದವರು ಅವರ ಪ್ರತಿನಿಧಿಯಂತೆ ಇರಬೇಕು ಎಂದು ಅವರು ಹೇಳುತ್ತಿದ್ದರು. ತಮ್ಮ ಮಕ್ಕಳನ್ನು ಟಾಂಗಾದಲ್ಲಿ ಶಾಲೆಗೆ ಕಳುಹಿಸುತ್ತಿದ್ದರು. ಮಕ್ಕಳಿಗಾಗಿ ಆಸ್ತಿ-ಪಾಸ್ತಿ ಮಾಡಲಿಲ್ಲ.
ಬಡತನದಲ್ಲೇ ಹುಟ್ಟಿ ಬೆಳೆದು ಸ್ವಯಂಪ್ರತಿಭೆಯಿಂದ, ಸತತ ಸಾಧನೆಯಿಂದ ವಿವಿಧ ಹಂತಗಳ ಮೂಲಕ ಪ್ರಧಾನಿ ಪಟ್ಟವೇರಿದರು. ಅಂತಹವರ ಜಯಂತಿಯನ್ನು ಔಪಚಾರಿಕವಾಗಿಯಾದರೂ ಕೇಂದ್ರ ಸರ್ಕಾರ ಆಚರಿಸದಿರುವುದು ನೋವಿನ ಸಂಗತಿ.