‘ಪ್ರಜಾವಾಣಿ’ಯ ಜನವರಿ 18ರ ಮುಖಪುಟದಲ್ಲಿ ಪ್ರಕಟವಾದ ‘ಸಾಹಿತ್ಯ ಸಂಭ್ರಮ’ದ ವರದಿಯಲ್ಲಿ ಯು.ಆರ್. ಅನಂತಮೂರ್ತಿಯವರ ಹೇಳಿಕೆ ‘...ಸಂಸ್ಕೃತದಂತೆ ಸತ್ತ ಬಳಿಕ ಕನ್ನಡದ ಚರ್ಚೆ ನಡೆಯಬೇಕೆ’ ಎಂಬುದನ್ನು ಓದಿ ಸಂಸ್ಕೃತ ಪ್ರೇಮಿಗಳಿಗೆ ನೋವಾಗಿದೆ. ಅವರ ಕನ್ನಡದ ಬಗೆಗಿನ ಕಳಕಳಿಗೆ ನನ್ನ ತಕರಾರಿಲ್ಲ. ಆದರೆ ಸಂಸ್ಕೃತ ಸತ್ತಿಲ್ಲ ಎಂಬುದನ್ನು ಅವರು ಗಮನಿಸಬೇಕು.
ಸಂಸ್ಕೃತ ನಿತ್ಯ ಬಳಕೆಯಿಂದ ಮರೆಯಾಗುತ್ತಿದೆ ನಿಜ. ಆದರೆ ಅದರ ಉಳಿವಿಗಾಗಿ ಲಕ್ಷಾಂತರ ಜನ ವಿಶ್ವದಾದ್ಯಂತ ಶ್ರಮಿಸುತ್ತಿದ್ದಾರೆ. ಶಾಲೆ–ಕಾಲೇಜುಗಳಲ್ಲಿ ಸಂಸ್ಕೃತದ ಅಧ್ಯಯನ ನಡೆಯುತ್ತಿದೆ. ಸಂಸ್ಕೃತ ಭಾರತಿ ಮುಂತಾದ ಅನೇಕ ಸಂಸ್ಥೆಗಳು ಸಂಸ್ಕೃತದ ಆಧುನೀಕರಣಕ್ಕಾಗಿ ಟೊಂಕ ಕಟ್ಟಿ ನಿಂತಿವೆ. ಸಂಸ್ಕೃತದಲ್ಲಿ ಮಾಸಪತ್ರಿಕೆಗಳು ಪ್ರಕಟವಾಗುತ್ತಿವೆ.
ಅಂತರ್ಜಾಲದಲ್ಲೂ ಸಂಸ್ಕೃತದ ಹೆಜ್ಜೆಗಳಿವೆ. ಸಂಸ್ಕೃತದಲ್ಲಿ ವಿಕಿಪೀಡಿಯಾ ಜಾಲತಾಣ ಕೂಡಾ ಇದೆ. ಇಲ್ಲಿ 10000ಕ್ಕೂ ಅಧಿಕ ಪುಟಗಳಲ್ಲಿ ಮಾಹಿತಿ ಸಿಗುತ್ತದೆ. ಸಂಸ್ಕೃತದಲ್ಲಿ ಸಂಭಾಷಣೆ ಮಾಡಬಲ್ಲ ಜನರು ವಿಶ್ವದಾದ್ಯಂತ ಇದ್ದಾರೆ.
ಸತ್ವಯುತವಾದ ಯಾವುದೇ ವಿಚಾರಕ್ಕೆ ಎಂದಿಗೂ ಸಾವಿಲ್ಲ. ಸತ್ವಭರಿತ ಸಂಸ್ಕೃತವೂ ಕೂಡಾ ಕಾಲನ ಪರೀಕ್ಷೆಯಲ್ಲಿ ಗೆದ್ದು
ಇಂದಿಗೂ ಜೀವಂತವಾಗಿದೆ. ಮುಂದೆಯೂ ಇರುತ್ತದೆ.