ಜಗದೀಶ್ ಹತ್ಯೆ ಆರೋಪಿ ಹರೀಶ್ಬಾಬು ಐಜಿಪಿ ಎದುರು ‘ಇನ್ಸ್ಪೆಕ್ಟರ್ನ ಜೀವಂತ ಬಿಡುವುದಿಲ್ಲ’ ಎಂದು ಗರ್ಜಿಸಿರುವುದನ್ನು ಓದಿ ಆಶ್ಚರ್ಯವೇನೂ ಆಗಲಿಲ್ಲ. ಈ ಹಿಂದೆ ಕೂಡ ಆತ ಇನ್ಸ್ಪೆಕ್ಟರ್ ಹತ್ಯೆಗೆ ತರೀಕೆರೆಯಲ್ಲಿ ಯತ್ನಿಸಿದ್ದ. ಆತನ ಮೇಲೆ 35–40 ಕೇಸುಗಳು ಇದ್ದರೂ ಅಪರಾಧ ಕೃತ್ಯದಲ್ಲಿಯೇ ತೊಡಗಿರುವುದನ್ನು ಗಮನಿಸಿದರೆ ಆತ ಪಳಗಿದವನಂತೆ ಕಂಡುಬಂದಿದ್ದು ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನೇ ಅರೆದು ಕುಡಿದಿರಬಹುದೆನಿಸುತ್ತಿದೆ.
ಸಮಾಜದಲ್ಲಿ ಹೆಚ್ಚುತ್ತಿರುವ ಅಪರಾಧ, ಅತ್ಯಾಚಾರ, ದರೋಡೆ, ಭ್ರಷ್ಟಾಚಾರ ಹಾಗೂ ಕೊಲೆಯಂತಹ ಪ್ರಕರಣಗಳಲ್ಲಿ ಭಾಗಿಯಾದವರೂ ಹೇಗೋ ನುಸುಳಿಕೊಂಡು ಆಚೆ ಬರುತ್ತಿದ್ದಾರೆ. ಹತ್ಯೆ, ಅತ್ಯಾಚಾರಕ್ಕೆ ಒಳಗಾದ ಕುಟುಂಬಗಳು ನಿರಂತರವಾಗಿ ಕಣ್ಣೀರಿಡುತ್ತಿವೆ. ಅತ್ತ ಜೈಲಿನಲ್ಲಿ ಕಾಲ ಕಳೆದ ಅಪರಾಧಿಗಳು ಒಂದು ಸುಂದರವಾದ ರಾಷ್ಟ್ರೀಯ ಹಬ್ಬದಂದು ಸನ್ನಡತೆಯ ಆಧಾರದ ಮೇಲೆ ಆಚೆ ಬಂದುಬಿಡುತ್ತಾರೆ! ಭ್ರಷ್ಟಾಚಾರ ಹಗರಣದ ಆರೋಪಿ ರಾಜಕಾರಣಿಗಳು ವರ್ಷ ಅಥವಾ ಆರು ತಿಂಗಳಿಗೆ ನಿರ್ದೋಷಿಗಳೆನಿಸಿಕೊಂಡು ಪುನಃ ಅಧಿಕಾರದ ಗದ್ದುಗೆ ಹಿಡಿಯುತ್ತಿದ್ದಾರೆ.
ಇನ್ನು ಅತ್ಯಾಚಾರದ ಕೇಸುಗಳಲ್ಲಿ ಸಿಲುಕಿರುವ ಸ್ವಾಮಿಗಳು ಪ್ರವಚನದಲ್ಲಿ ತೊಡಗಿದ್ದಾರೆ. ಈ ನಡುವೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ತೀವ್ರ ಚರ್ಚೆ ನಡೆಯುತ್ತಿರುವುದನ್ನು ಗಮನಿಸಿದರೆ ನಮ್ಮ ವ್ಯವಸ್ಥೆಯಲ್ಲಿ ಅಪರಾಧಿಗಳಿಗಿರುವಷ್ಟು ರಕ್ಷಣೆ ಸಜ್ಜನರಿಗಿಲ್ಲ ಎನ್ನಿಸದೇ ಇರದು.