ಈ ತಿಂಗಳ 24ರಂದು ನಮ್ಮ ಮನೆಯವರೊಂದಿಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿ ದೇವಿಯ ದರ್ಶನ ಪಡೆದು ವಾಪಸ್ ಹೊರಟಾಗ ರಾತ್ರಿ ೯ ಗಂಟೆ ಆಗಿತ್ತು. ತಿರುವುಗಳನ್ನು ದಾಟುತ್ತಾ ಕಾರನ್ನು ಚಲಾಯಿಸುತ್ತಿದ್ದಾಗ ಎರಡು ಬೈಕ್ಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ಇಬ್ಬರು ಹುಡುಗರು ಕಾರನ್ನು ಪಕ್ಕಕ್ಕೆ ಚಲಿಸುವಂತೆ ಸೂಚಿಸುತ್ತಿದ್ದರು.
ವೇಗದಲ್ಲಿದ್ದ ನಾನು ಬ್ರೇಕ್ ಹಾಕಿ, ಮನದಲ್ಲಿಯೇ ‘ಕುಡುಕರ ಸಹವಾಸ' ಎಂದು ಬೈದುಕೊಳ್ಳುತ್ತಾ ಪಕ್ಕಕ್ಕೆ ಚಲಿಸಿ ನೋಡಿದರೆ ಎದೆ ಝಲ್ ಎಂದಿತು. ಹೆಬ್ಬಾವೊಂದು ರಸ್ತೆ ದಾಟುತ್ತಿತ್ತು. ಈ ಯುವಕರು ಅದರ ಪ್ರಾಣ ಉಳಿಸಲು ಈ ರೀತಿ ಮಾಡುತ್ತಿದ್ದರು. ಇಂದಿನ ಯುವ ಪೀಳಿಗೆಯನ್ನು ಸದಾ ಬೈಯುವ ನನ್ನನ್ನೂ ಸೇರಿದಂತೆ ಎಲ್ಲರಿಗೂ ಸಂತಸ ಉಂಟು ಮಾಡಿದ ಈ ಅನುಭವ ಹಂಚಿಕೊಳ್ಳಬೇಕಾದ್ದೆ. ಹೆಬ್ಬಾವಿನ ಪ್ರಾಣ ರಕ್ಷಿಸಲು ಮುಂದಾದ ಆ ಇಬ್ಬರು ಹುಡುಗರು ಅಭಿನಂದನಾರ್ಹರು.
ಘಟನೆ ೨: ೨೬ರಂದು ಟಿ.ಕೆ.ಬಡಾವಣೆಯಲ್ಲಿ ವೈದ್ಯರೊಬ್ಬರ ದವಾಖಾನೆ ಎದುರು ಒಬ್ಬ ಕುಡುಕ ಗಲಾಟೆ ಮಾಡುತ್ತಾ ವಾಂತಿ ಮಾಡಿದ. ಅಲ್ಲೇ ಹೋಗುತ್ತಿದ್ದ ನಿವೃತ್ತ ಎ.ಸಿ.ಪಿ. ನಾಣಯ್ಯ ಅವರು ಅದನ್ನು ನೋಡಿ, ಮಫ್ತಿಯಲ್ಲಿದ್ದ ಪೋಲಿಸರನ್ನು ಕರೆದು ಒಂದು ಕೊಡ ನೀರನ್ನು ಆ ಕುಡುಕನ ಮೇಲೆ ಸುರಿಸಿ, ಅವನಿಗೆ ಒಂದು ಬಕೆಟ್ ನೀರನ್ನು, ಪೊರಕೆಯನ್ನು ನೀಡಿ ಆ ಜಾಗವನ್ನು ಅವನಿಂದಲೇ ಸ್ವಚ್ಛ ಮಾಡಿಸಿದರು. ಸಾರ್ವಜನಿಕ ಹಿತಾಸಕ್ತಿಯ ವಿಷಯದಲ್ಲಿ ಅವರು ತೋರಿಸಿದ ಆಸಕ್ತಿಯನ್ನು ಮೆಚ್ಚದೆ ಇರಲು ಆಗಲಿಲ್ಲ.
ಮೇಲೆ ತಿಳಿಸಿದಂತಹ ಘಟನೆಗಳು ಸಾಮಾನ್ಯವಾಗಿ ದಿನನಿತ್ಯ ಘಟಿಸುತ್ತವೆಯಾದರೂ ಇವು ಹಲವು ರೀತಿಯಲ್ಲಿ ನಾಗರಿಕರ ಕಣ್ಣು ತೆರೆಸುವಂತಿರುತ್ತವೆ.
ಮನುಷ್ಯರ ಸ್ವಭಾವವನ್ನು ಅವರ ಮೇಲ್ನೋಟದ ಕುರುಹುಗಳಿಂದ, ನಡವಳಿಕೆಯಿಂದ, ಸಿನಿಕತನದಿಂದ ಪೂರ್ವ ನಿರ್ಧಾರ ಮಾಡುವುದು ಸರಿಯಲ್ಲ. ಎಲ್ಲರಲ್ಲೂ ದುಷ್ಟತನ, ಸಮಾಜ ವಿರೋಧಿ ನಡವಳಿಕೆ ಇರಲೇಬೇಕೆಂದಿಲ್ಲ. ಸಮಷ್ಟಿ ಹಿತದ ಸಮಾಜಮುಖಿ ಧೋರಣೆಗಳು ಕೆಲವರಲ್ಲಿ ಮೇಲ್ನೋಟಕ್ಕೇ ಕಾಣುವಂತಿದ್ದರೆ ಕೆಲವರಲ್ಲಿ ಸುಪ್ತವಾಗಿರುತ್ತವೆ.
ಬಹಿರಂಗವಾಗಿ, ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜದ ಹಿತದೃಷ್ಟಿಯಿಂದ ಕೈಗೊಳ್ಳುವ ಇಂತಹ ಕೈಂಕರ್ಯಗಳು ನಮ್ಮನ್ನು ನಿರ್ಲಿಪ್ತತೆಯಿಂದ ಹೊರತಂದು ನಾವೂ ಇಂತಹ ನಡವಳಿಕೆಗಳನ್ನು ಸಾರ್ವಜನಿಕವಾಗಿ ರೂಢಿಸಿಕೊಳ್ಳಲು ಸಹಾಯಕ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.