ರಾಜ್ಯದಲ್ಲಿ ಮಳೆ ಇಲ್ಲವಾದ್ದರಿಂದ ವಿದ್ಯುತ್ ಅಭಾವ ತೀವ್ರವಾಗಿದೆ. ನಗರ ಜೀವನಕ್ಕೆ ವಿದ್ಯುತ್ ತೀರಾ ಅನಿವಾರ್ಯ. ವಿದ್ಯುತ್ ಅಭಾವದಿಂದ ನಾಗರಿಕರಿಗೆ ಬಹಳ ತೊಂದರೆಯಾಗಿದೆ. ಸೌರಶಕ್ತಿಯ ಮೊರೆ ಹೋಗುವುದರಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ನಗರ ಪ್ರದೇಶಗಳಲ್ಲಿ ಬೆಳಿಗ್ಗೆ ಗೀಸರ್ಗಳಿಗೆ ಮತ್ತು ಸಂಜೆ ಹೊತ್ತಿನಲ್ಲಿ ದೀಪಗಳಿಗೆ ಹೆಚ್ಚು ವಿದ್ಯುತ್ ಬೇಕು.
ಹೆಚ್ಚು ವಿಸ್ತೀರ್ಣ ಇರುವ ಮನೆಗಳಿಗೆ, ಬಹು ಅಂತಸ್ತಿನ ಫ್ಲ್ಯಾಟ್ಗಳಿಗೆ ಸೌರಶಕ್ತಿ ಚಾಲಿತ ಬಾಯ್ಲರ್ ಕಡ್ಡಾಯಗೊಳಿಸಬೇಕು. ಅವಕಾಶವಿದ್ದರೆ ದೀಪಗಳಿಗೂ ಸೌರವಿದ್ಯುತ್ ಉಪಯೋಗಿಸಬೇಕು. ಅಪಾರ್ಟ್ಮೆಂಟ್, ಬಹುಅಂತಸ್ತಿನ ಕಟ್ಟಡಗಳು, ಚಿತ್ರಮಂದಿರ, ಮದುವೆ ಮಂಟಪಗಳ ಚಾವಣಿಗೆ ಸೌರಫಲಕ ಅಳವಡಿಸಬೇಕು. ಇದರಿಂದ ಜಲ ವಿದ್ಯುತ್ ಮೇಲೆ ಅವಲಂಬನೆ ಕಡಿಮೆಯಾಗುತ್ತದೆ. ನಗರದಲ್ಲಿ ವರ್ಷದ ಬಹುಪಾಲು ದಿನ ಉತ್ತಮ ಬೆಳಕು ಸಿಗುತ್ತದೆ. ಮಳೆ ನೀರಿನ ಸಂಗ್ರಹದಂತೆ ಸೌರಶಕ್ತಿಯ ಬಳಕೆಯನ್ನೂ ಕಡ್ಡಾಯಗೊಳಿಸಬೇಕು.