ಏರ್ಟೆಲ್ ಕಂಪೆನಿಯು ಗ್ರಾಹಕರನ್ನು ವಂಚಿಸುತ್ತಿರುವುದಕ್ಕೆ, ನಾನು ಈಚೆಗೆ ಅನುಭವಿಸಿರುವ ಎರಡು ಪ್ರಸಂಗಗಳನ್ನು ವಿವರಿಸುತ್ತೇನೆ.
ಬ್ಯಾಲನ್ಸ್ ಮೊತ್ತವು ಕೇವಲ 5 ಪೈಸೆ ಉಳಿದಿರುವುದನ್ನು ಗಮನಿಸಿ, ₹ 50 ರೀಚಾರ್ಜ್ ಮಾಡಿಸಿದೆ. ‘ರೀಚಾರ್ಜ್ ಸಕ್ಸೆಸ್ಫುಲ್’ ಎಂಬ ಮೆಸೇಜ್ ಬಂದ ಬೆನ್ನ ಹಿಂದೆಯೇ, ‘ಥ್ಯಾಂಕ್ಸ್ ಫಾರ್ ಯೂಜಿಂಗ್... ಸರ್ವೀಸ್, ₹ 35 ಮುರಿಯಲಾಗಿದೆ’ ಎಂಬ ಸಂದೇಶ ಬಂತು!
ರೀಚಾರ್ಜ್ ಮಾಡಿದವನು ನನ್ನ ಕೈಗೆ ಮೊಬೈಲು ಕೊಡುತ್ತಿದ್ದಂತೆ, ಮತ್ತೆ ಅಂಥದೇ ಇನ್ನೊಂದು ಸಂದೇಶ ಬಂದಿತು. ನಾನು ನೋಡುತ್ತಿದ್ದಂತೆ, ಬ್ಯಾಲನ್ಸ ಐದೇ ಪೈಸೆ ಉಳಿಯಿತು! ಇಷ್ಟೆಲ್ಲಾ ಆದದ್ದು, ರೀಚಾರ್ಜ್ ಮಾಡಿದ, ಕೆಲವೇ ಸೆಕೆಂಡುಗಳಲ್ಲಿ!
ಎರಡು ದಿನಗಳ ಬಳಿಕ, ಮತ್ತೆ ಬೇರೆ ಕಡೆ ₹ 50 ರೀಚಾರ್ಜ್ ಮಾಡಿಸಿದೆ. ಒಂದೆರಡು ಕ್ಷಣಗಳ ಬಳಿಕ ‘ನಿಮ್ಮ ಮೊಬೈಲಿಗೆ ಟೈನಿ ಟಿ.ವಿ.ಸರ್ವೀಸ್ ನೀಡಲಾಗಿದೆ. ಈ ಸೇವೆಗಾಗಿ ₹ 35 ಅನ್ನು ಒಂದು ವಾರಕ್ಕೆ ಕಡಿತ ಮಾಡಲಾಗುವುದು!’ ಎಂಬ ಸಂದೇಶ ಬಂತು.
ನಾನು ಯಾವ ಹೆಚ್ಚುವರಿ ಸೇವೆಗಳಿಗೂ ಬೇಡಿಕೆ ಸೂಚಿಸಿರಲಿಲ್ಲ! ಗ್ರಾಹಕರ ಹಣವನ್ನು ಈ ರೀತಿ ಮುರಿಯುವ ಮುನ್ನ, ಗ್ರಾಹಕರ ಸೇವಾ ಬೇಡಿಕೆ ಗಮನಿಸಬೇಕಲ್ಲವೇ?! ಗ್ರಾಹಕರು ಯಾವ ಸೇವೆಯನ್ನೂ ಕೇಳದಿರುವಾಗ, ಅವರ ಪೂರ್ವಾನುಮತಿಯಿಲ್ಲದೇ ಈ ರೀತಿ ಹಣ ಮುರಿಯುವುದು ವಂಚನೆಯಲ್ಲವೇ?