ಡಾ.ಎಂ.ಎಂ. ಕಲಬುರ್ಗಿಯವರು ಈಚೆಗೆ ಗದಗಿನಲ್ಲಿ ಮಾತನಾಡುತ್ತಾ ‘ಹಿಂದೂ’ ಎಂಬ ಧರ್ಮವೇ ಇಲ್ಲ ಎಂಬ ವಿತಂಡವಾದವನ್ನು ಮಂಡಿಸಿರುವುದು ವರದಿಯಾಗಿದೆ. ‘ಧರ್ಮ’ ಶೀರ್ಷಿಕೆಯಡಿ ‘ಹಿಂದೂ’ ಎಂದು ದಾಖಲಿಸಲು ಭಾರತದ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ‘ಹಿಂದೂ ವಿವಾಹ ಕಾನೂನು’ ಇದೆ. ಕೋಲ್ಕತ್ತದ ಒಂದು ಮಠವು ತಾನು ‘ಹಿಂದೂ’ ವ್ಯಾಪ್ತಿಗೆ ಬರುವುದಿಲ್ಲವೆಂದು ಹೇಳಿಕೊಂಡಾಗ ಸುಪ್ರೀಂಕೋರ್ಟ್ ಪೂರ್ಣ ಪೀಠವು 1995ರಲ್ಲಿ ತೀರ್ಪು ನೀಡಿ ಅದು ‘ಹಿಂದೂ ಧರ್ಮ’ಕ್ಕೆ ಸೇರಿದ ಮಠವೆಂಬ ಐತಿಹಾಸಿಕ ತೀರ್ಪು ನೀಡಿದೆ.
ಗಾಂಧೀಜಿ ತಮ್ಮನ್ನು ‘ಸನಾತನಿ ಹಿಂದೂ’ ಎಂದೇ ಹೆಮ್ಮೆಯಿಂದ ಕರೆದುಕೊಂಡಿದ್ದಾರೆ. ಸ್ವಾಮಿ ವಿವೇಕಾನಂದರು 1893ರಲ್ಲಿ ಷಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ತಮ್ಮನ್ನು ‘ಹಿಂದೂ’ ಎಂದು ಹೆಮ್ಮೆಯಿಂದ ಹೇಳಿಕೊಂಡರು. 12–13ನೇ ಶತಮಾನಗಳಲ್ಲಿ ನೇಪಾಳವನ್ನು ಆಳಿದ ‘ಕರ್ನಾಟ ಕುಲ’ದ ದೊರೆಗಳನ್ನು ನೇಪಾಳದ ಇತಿಹಾಸಕಾರರು ‘ಶ್ರೇಷ್ಠ ಹಿಂದೂ’ಗಳೆಂದೇ ಕರೆದಿದ್ದಾರೆ. ಸಿದ್ಧಗಂಗಾ ಶ್ರೀಗಳು ‘ಹಿಂದೂ ಧರ್ಮದ ಉದ್ಧಾರವೇ ಜಗತ್ತಿನ ಉದ್ಧಾರ, ಹಿಂದೂ ಧರ್ಮದ ನಾಶ ಜಗತ್ತಿನ ವಿನಾಶ’ ಎಂದಿದ್ದಾರೆ. ಅವರೇ ಇನ್ನೊಂದೆಡೆ ‘ವೀರಶೈವವು (ಲಿಂಗಾಯತ) ಹಿಂದೂ ಧರ್ಮದ ಅವಿಭಾಜ್ಯ ಅಂಗ’ ಎಂದಿದ್ದಾರೆ. ಶಿವರಾಮ ಕಾರಂತ, ಸಿದ್ಧಯ್ಯ ಪುರಾಣಿಕ, ವೀರೇಂದ್ರ ಹೆಗ್ಗಡೆ ಮೊದಲಾದವರು ಹಿಂದೂ ಧರ್ಮದ ಬಗ್ಗೆ ಮಾತನಾಡಿದ್ದಾರೆ.
ಡಾ. ಎಸ್.ರಾಧಾಕೃಷ್ಣನ್ ಅವರಂತಹ ಶ್ರೇಷ್ಠ ತತ್ವಜ್ಞಾನಿಗಳು ಹಿಂದೂ ಧರ್ಮದ ಆಧ್ಯಾತ್ಮಿಕ ಚಿಂತನೆಗಳ ಬಗ್ಗೆ ಕೃತಿಗಳನ್ನು ಬರೆದಿದ್ದಾರೆ. ‘ಹಿಂದೂ ಧರ್ಮ’ದ ಇರುವಿಕೆಯನ್ನೇ ಪ್ರಶ್ನಿಸುವುದು ಸಾಮಾನ್ಯ ಜ್ಞಾನದ ಕೊರತೆಯೆಂದು ವಿಷಾದದಿಂದ ಹೇಳಬೇಕಾಗಿದೆ. ‘ಹಿಂದೂ’ ಎಂಬ ಧರ್ಮವೇ ಇಲ್ಲ ಎಂಬ ಕಲಬುರ್ಗಿ ಅವರ ವಾದವು ಪ್ರಚಾರ ಪಡೆಯುವುದನ್ನು ಎಲ್ಲರೂ ತಡೆಗಟ್ಟುವುದು ಅಗತ್ಯವಾಗಿದೆ.