ಕೆಲವು ಪ್ರಸಿದ್ಧ ದೇವಸ್ಥಾನಗಳ ಹೊರ ಭಾಗದಲ್ಲಿ ಭಕ್ತಾದಿಗಳ ಪಾದರಕ್ಷೆ ಇಡಲು ಸ್ಟ್ಯಾಂಡ್ ವ್ಯವಸ್ಥೆ ಇದೆ. ದ್ವಿಚಕ್ರ ವಾಹನ ಚಾಲಕರಿಗೆ ಹಾಗೂ ಹಿಂಬದಿ ಸವಾರರಿಗೆ ಮೆಟ್ಟು ಇಲ್ಲದಿದ್ದರೂ ಅಡ್ಡಿಯಿಲ್ಲ, ಹೆಲ್ಮೆಟ್ಟು ಕಡ್ಡಾಯ ಎಂಬುದಾಗಿ ಸರ್ಕಾರ ಈಗ ಆದೇಶ ಹೊರಡಿಸಿದೆ.
ಹೆಲ್ಮೆಟ್ ಹಾಕಿಕೊಂಡೆ ದೇವಸ್ಥಾನದ ಒಳಗೆ ಹೋಗುವುದು ಸರಿಯಾಗುವುದಿಲ್ಲ. ಕೈಯಲ್ಲಿ ಹಿಡಿಯುವ ಎಂದರೆ ಎರಡೂ ಕೈ ಜೋಡಿಸಿ ನಮಸ್ಕಾರ ಮಾಡಲೂ ಆಗುವುದಿಲ್ಲ. ವಾಹನದಲ್ಲೇ ಇಟ್ಟು ಹೋಗುವ ಅಂದರೆ ವಾಪಸ್ ಬರುವಾಗ ಅದು ಅಲ್ಲೇ ಇರುತ್ತದೆ ಎಂದು ಹೇಳಲಾಗುವುದಿಲ್ಲ.
ಇಷ್ಟು ದಿನ ನಿಶ್ಚಿಂತೆಯಿಂದ ದೇವಳದ ಪ್ರದಕ್ಷಿಣೆ ಹಾಕುತ್ತಿದ್ದ ಭಕ್ತರಿಗೆ ಇನ್ನು ಮುಂದೆ ಹೆಲ್ಮೆಟ್ನದೇ ಚಿಂತೆ. ಹೀಗಾಗದಂತೆ ದೇವಳದ ಹೊರಭಾಗದಲ್ಲಿ ಹೆಲ್ಮೆಟ್ ಸ್ಟ್ಯಾಂಡ್ ವ್ಯವಸ್ಥೆ ಮಾಡಿ, ಕಾವಲುಗಾರನನ್ನು ನೇಮಿಸುವ ಮೂಲಕ, ಭಕ್ತರು ನಿಶ್ಚಿಂತೆಯಿಂದ ದೇವರ ದರ್ಶನ ಮಾಡುವಂತೆ ಆಡಳಿತ ಮಂಡಳಿ ಯವರು ಕ್ರಮ ಕೈಗೊಳ್ಳಬೇಕಾಗಿದೆ.