ವಿರೋಧ ಪಕ್ಷದಲ್ಲಿದ್ದಾಗ ಶ್ರೀ ಕೃಷ್ಣ ಮಠದ ಸರ್ಕಾರೀಕರಣಕ್ಕೆ ಒತ್ತಾಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಪರ್ಯಾಯಕ್ಕೆ ಸಾಕ್ಷಿಯಾಗುವರೇ ಎಂದು ಕೆಲವರು ಸಾರ್ವಜನಿಕ ವೇದಿಕೆಯಲ್ಲಿ ಕುತ್ಸಿತವಾಗಿ ಕೇಳುತ್ತಿದ್ದಾರೆ. ವಾಸ್ತವದಲ್ಲಿ ಸಿದ್ದರಾಮಯ್ಯನವರು ಉಡುಪಿ ಮಠದ ಸರ್ಕಾರೀಕರಣಕ್ಕೆ ಒತ್ತಾಯಿಸಿರಲಿಲ್ಲ. ಅವರು ಒತ್ತಾಯಿಸಿದ್ದು ಕೃಷ್ಣ ದೇವಸ್ಥಾನದ ಸರ್ಕಾರೀಕರಣಕ್ಕೆ ಮಾತ್ರ.
ಉಡುಪಿಯಲ್ಲಿ ಕೃಷ್ಣ ‘ದೇವಸ್ಥಾನ’ ಬೇರೆ ಮತ್ತು ಕೃಷ್ಣ ‘ಮಠ’ ಬೇರೆ ಎಂಬುದನ್ನು ಗಮನಿಸಬೇಕು. ಮಠ ಮತ್ತು ದೇವಸ್ಥಾನಗಳ ನಡುವೆ ಗೊಂದಲ ಸೃಷ್ಟಿಸಿ ಕೆಲವರು ಉದ್ದೇಶಪೂರ್ವಕವಾಗಿ ಸಿದ್ದರಾಮಯ್ಯನವರ ವಿರುದ್ಧ ಜನರನ್ನು ಆಗ ಪ್ರಚೋದಿಸಿದ್ದು ನಿಜ. ಮದ್ರಾಸ್ ಹೈಕೋರ್ಟ್ ಸಹ ಕೃಷ್ಣ ದೇವಸ್ಥಾನ ಸಾರ್ವಜನಿಕ ಆಸ್ತಿ, ಅದು ಮಠದ ಖಾಸಗಿ ಆಸ್ತಿಯಲ್ಲ ಎಂದು 1950ರ ದಶಕದಲ್ಲಿಯೇ ತೀರ್ಪು ನೀಡಿತ್ತು. ಈ ತೀರ್ಪನ್ನು ಅವಗಣಿಸಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೃಷ್ಣ ದೇವಸ್ಥಾನವನ್ನು ಖಾಸಗೀಕರಣಗೊಳಿಸಿ ಮಠದ ಅಧೀನಕ್ಕೆ ಕೊಟ್ಟಿತು.
‘ಉಡುಪಿ ಮಠವನ್ನೇ ಆಗಲಿ ಅಥವಾ ಉಡುಪಿ ದೇವಸ್ಥಾನವನ್ನೇ ಆಗಲಿ ಸರ್ಕಾರೀಕರಣಗೊಳಿಸಿದರೆ ಅದರ ವಿರುದ್ಧ ಉಗ್ರವಾಗಿ ಹೋರಾಡುತ್ತೇನೆ’ ಎಂದು ಜನಾರ್ದನ ಪೂಜಾರಿ ಹೇಳಿದ್ದರು. ಆದರೆ ಅಂದು ಉಡುಪಿ ಮಠದ ಪರವಾಗಿ ತಮ್ಮದೇ ಪಕ್ಷದ ವಿರುದ್ಧ ಹೋರಾಡಿದ್ದ ಪೂಜಾರಿಯವರಿಗೆ ಇಂದು ರಾಜಕೀಯ ಅಧಿಕಾರವಿಲ್ಲದ ಕಾರಣ ಪರ್ಯಾಯದ ಅಧಿಕೃತ ಆಹ್ವಾನಿತರಲ್ಲಿ ಅವರ ಹೆಸರೇ ಇಲ್ಲ.