ಪರೀಕ್ಷೆಗಳಲ್ಲಿ ನಕಲು ದಂಧೆ ಕುರಿತ ರಾಜಕುಮಾರ ಎಂ. ದಣ್ಣೂರ ಅವರ ಪತ್ರದಿಂದ (ವಾ.ವಾ. ಮೇ 10) ನೋವಾಗಿದೆ. ವಿಜಯಪುರ ಜಿಲ್ಲೆಯಲ್ಲಿರುವ ಒಂದು ಊರು ಆಲಮೇಲದಲ್ಲಿ ನಡೆದ ಸಾಮೂಹಿಕ ನಕಲು ನಮಗೂ ಬೇಸರ ತಂದಿದೆ. ಆದರೆ ಜಿಲ್ಲೆಯಲ್ಲಿ ಎಲ್ಲ ಪರೀಕ್ಷೆಗಳೂ ಅದೇ ರೀತಿ ನಡೆಯುತ್ತವೆ ಎಂದು ನಿರಾಧಾರವಾದ ಹೇಳಿಕೆ ಕೊಟ್ಟಿರುವುದು ಸರಿಯಲ್ಲ.
ಹಾಗಿದ್ದರೆ ಯಾವ ಜಿಲ್ಲೆ ನಕಲು ಮುಕ್ತವಾಗಿದೆ? ಕಳೆದ ವರ್ಷ ಇದೇ ಬಿ.ಎ. ಪರೀಕ್ಷೆಯ ಸಮಯದಲ್ಲಿ ಗದಗ ಜಿಲ್ಲೆಯಲ್ಲಿ ನಕಲು ನಡೆದಿರುವುದಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ರಾಜ್ಯದಲ್ಲಿ ಕೆಲವು ದಿನಗಳಿಂದ ಪಿ.ಯು. ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಸುದ್ದಿ ಸದ್ದು ಮಾಡಿತು. ಈ ವಿಷಯ ಹೇಗೋ ಹೊರಗೆ ಬಂತು. ಆದರೆ ಇಂತಹ ಅಕ್ರಮ ಎಷ್ಟು ವರ್ಷಗಳಿಂದ ನಡೆದಿತ್ತೋ ಗೊತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಯಾವುದೋ ಒಂದು ಜಿಲ್ಲೆಯ ಮೇಲೆ ಅಪವಾದ ಹೊರಿಸುವುದು ಸರಿಯಲ್ಲ. ಬುಟ್ಟಿಯಲ್ಲಿರುವ ಹಣ್ಣುಗಳಲ್ಲಿ ಒಂದು ಕೆಟ್ಟರೆ ಎಲ್ಲವೂ ಕೆಟ್ಟಂತೆ ಅಲ್ಲವಲ್ಲ.