ಬಸವಣ್ಣ ಜನಿಸಿದ ಬಸವನಬಾಗೇವಾಡಿಯ ಮನೆಯಲ್ಲಿ ಹಳಗನ್ನಡ ಲಿಪಿಯುಳ್ಳ ‘ಬಸವೇಶ್ವರ ಜನ್ಮಸ್ಥಳ’ ಎಂಬ ಪ್ರಾಚೀನ ಶಿಲೆ ಹಾಗೂ ಈ ಕ್ಷೇತ್ರ ಚರಿತ್ರೆಯ ಒಂದು ಶಾಸನವಿತ್ತು. ಪುರ ಪ್ರಮುಖರಾಗಿದ್ದ ದಿ. ಚನ್ನಪ್ಪ ನಾಯಕೋಡಿ, ದಿ. ಈರಪ್ಪ ಕಲಾಳ, ದಿ. ಬಸವರಾಜ ಕುಂಟೋಜಿ ಹಾಗೂ ದಿ. ಬಾಳನಗೌಡ ಪಾಟೀಲ ಅವರೊಡಗೂಡಿ ನಾನೂ ಅವುಗಳನ್ನು ಗಮನಿಸಿದ್ದೇನೆ. ಕಾಲಾಂತರದಲ್ಲಿ ‘ಬಸವ ಜನ್ಮಸ್ಥಳ’ದಲ್ಲಿ ಬಸವ ಸ್ಮಾರಕ ನಿರ್ಮಿಸುವ ಯೋಜನೆ ಕಾರಣ ಕರ್ನಾಟಕ ಸರಕಾರವು ಅಲ್ಲಿ ವಾಸವಾಗಿದ್ದ ಕುಟುಂಬದವರಿಗೆ ಮನೆ ತೆರವುಗೊಳಿಸುವಂತೆ ಪತ್ರ ಮುಖೇನ ಆದೇಶ ಜಾರಿ ಮಾಡಿತ್ತು. ಆ ನಂತರವೇ ಆ ಪ್ರಾಚೀನ ಶಿಲೆ ಹಾಗೂ ಶಾಸನ ಕಾಣೆಯಾಗಿವೆ ಎಂಬುದು ಸ್ಥಳೀಯರ ಅಭಿಪ್ರಾಯ.
ಅಮೂಲ್ಯವಾದ ಪ್ರಾಚೀನ ಶಿಲೆ ಮತ್ತು ಶಾಸನ, ಬಸವನಬಾಗೇವಾಡಿಯ ಪರಿಸರದಲ್ಲಿ ಕಳೆದು ಹೋಗಿವೆ. ಕಳೆದುಹೋದ ಶಾಸನ ಹಾಗೂ ಶಿಲೆಯನ್ನು ಹುಡುಕಬೇಕಾಗಿದೆ. ಇವು ಬಸವಣ್ಣನ ಚರಿತ್ರೆಯನ್ನು ಅಧಿಕೃತವಾಗಿ ತಿಳಿಸುವ ಅಪೂರ್ವ ಶಿಲ್ಪಗಳಾಗಿದ್ದು ಅತಿ ಅಪರೂಪವಾಗಿವೆ. ಹಾಗಾಗಿ ಸಂಶೋಧಕರು ಶ್ರದ್ಧೆಯಿಂದ ಶೋಧಿಸಬೇಕಾಗಿದೆ.
ಕರ್ನಾಟಕ ಸರ್ಕಾರವು ಬಸವನಬಾಗೇವಾಡಿಯಲ್ಲಿರುವ ಬಸವಣ್ಣನ ಜನ್ಮಸ್ಥಳದಲ್ಲಿ ‘ಬಸವ ಜನ್ಮಸ್ಮಾರಕ’ ನಿರ್ಮಿಸಿದೆ. ಈ ಎರಡು ಶಿಲ್ಪಗಳು ದೊರಕಿ ಬಸವ ಸ್ಮಾರಕದಲ್ಲಿ ಪ್ರತಿಷ್ಠಾಪನೆಯಾದಾಗ ಮತ್ತಷ್ಟು ಐತಿಹಾಸಿಕ ಮೆರುಗು ಬರುತ್ತದೆ. ಈ ನಿಟ್ಟಿನಲ್ಲಿ ಸಂಶೋಧಕರು ವಿಶೇಷ ಆಸಕ್ತಿ ವಹಿಸಲಿ.