ಸಂಗಾತಿ ವಿಯೋಗದ ನಂತರ ಎರಡನೇ ಇನ್ನಿಂಗ್ಸ್ ಪ್ರಯತ್ನಿಸುವುದಲ್ಲ, ಆರಂಭಿಸಲೇ ಬೇಕು. ಆದರೆ ಮಕ್ಕಳಿದ್ದರೆ ಅವರ ಲಾಲನೆ ಪಾಲನೆ ಹಾಗೂ ಭವಿಷ್ಯದ ಬಗ್ಗೆ ಕೈ ಹಿಡಿಯುವವನ/ಳ ಸಂಗಡ ದೀರ್ಘ ಸಮಾಲೋಚನೆ ಮುಖ್ಯ. ಇಬ್ಬರಲ್ಲಿ ಇರುವ ಹವ್ಯಾಸಗಳು ಬಗ್ಗೆ ಪರಸ್ಪರ ಮನ ಬಿಚ್ಚಿ ಮಾತನಾಡಿದ ನಂತರ ಒಂದು ಒಳ್ಳೆ ತೀರ್ಮಾನಕ್ಕೆ ಬರಬೇಕು. ಕೆಲವು ಸಂದರ್ಭಗಳಲ್ಲಿ ಇಬ್ಬರಿಗೂ ಮಕ್ಕಳು ಇರುವ ಸಾಧ್ಯತೆಗಳೂ ಇರಬಹುದು. ಆಗ ಮಕ್ಕಳಲ್ಲಿ ಸಾಮರಸ್ಯ ಬೆಳಸಬೇಕು.
ಜಾತಿಗಳು ಬೇರೆ ಬೇರೆ ಆದಲ್ಲಿ ಅಲ್ಲಿಯೂ ಜಾತ್ಯತೀತ ಮನೋಭಾವ ಭಿತ್ತಿ ಪೋಷಿಸಬೇಕು. ಮಕ್ಕಳ ಬೇಕು ಬೇಡಗಳನ್ನು ಕಾಲಕಾಲಕ್ಕೆ ತೀರಿಸುವ ಅಥವಾ ಸಮಾಧಾನ ಪಡಿಸುವ ನಿಟ್ಟಿನಲ್ಲಿ ಸಾಗಬೇಕು. ಅಸಹಾಯಕ ವೃದ್ದ ಅವಲಂಬಿತರನ್ನು ಕೈ ಹಿಡಿಯಬೇಕು. ಬರೀ ಇಬ್ಬರ ಸ್ವಾರ್ಥವಾಗಬಾರದು. ಲೈಂಗಿಕ ತೃಪ್ತಿಯ ಕಡೆಗೂ ಹೆಚ್ಚು ಒತ್ತು ಕೊಡಬಾರದು. ಒಂದು ವೇಳೆ ಆದರೆ ಸಮಾಜ ಅದನ್ನು ಅನೈತಿಕ ಎಂದು ಕರೆದು ದೂಷಣೆ ಮಾಡುವುದು ಖಚಿತ.
ಸಾಂಪ್ರದಾಯಿಕವಾಗಿ ಕೆಲವು ಮನೆತನಗಳ ಪರಂಪರೆಯಂತೆ ಒಮ್ಮೆ ಪರಿಣಯ ಹೊಂದಿದ ಮೇಲೆ ಮರು ಪರಿಣಯ ಆಗಲು ಸಂಪ್ರದಾಯ ಒಪ್ಪುವುದಿಲ್ಲ. ಅದರೂ ಸಮದಾಯ ಅವರನ್ನು ಅನೈತಿಕ ಮತ್ತು ಅನಿಷ್ಟದ ದೃಷ್ಟಿಯಿಂದ ಕಂಡು ಶುಭ ಕಾರ್ಯಗಳಲ್ಲಿ ಅವರನ್ನು ಕಡೆಗಣಿಸುವುದೂ ಉಂಟು.
ಈ ಎಲ್ಲ ಪದ್ಧತಿಗಳನ್ನು ದಾಟಿ ಸಂಗಾತಿ ವಿಯೋಗ ಹೊಂದಿದವರು ಮರು ವಿವಾಹವೋ, ಇಲ್ಲ ಕೂಡುವುದೋ ಆಗಲೇ ಬೇಕಾದ ಕಾಲ ಇದು. ಹೇಗೆಂದರೆ ಈಗ ಅವಿಭಕ್ತ ಕುಟುಂಬಗಳು ಗ್ರಾಮೀಣ ಪ್ರದೇಶದಲ್ಲೂ ಕಾಣಲು ಸಾಧ್ಯವಿಲ್ಲ. ಇನ್ನು ನಗರಗಳಲ್ಲಿ ಮೊದಲೇ ಇಲ್ಲ. ಅತ್ತೆ ಮಾವ, ಹೆತ್ತವರು ಎಷ್ಟು ದಿನ ಆಸರೆಯಾಗಬಲ್ಲರು. ಆಸರೆ ಆದರೂ ಅಳಕು, ಅಣಕ, ಹಿಂಸೆ ಆಗಿಂದಾಗ್ಗೆ ಸುಳಿಯುತ್ತ ನೆಮ್ಮದಿ ಸಿಗಲಾರದು.
ಇನ್ನು ಸಮಾಜ ಕುಂತರೂ ನಿಂತರೂ ಅನುಮಾನಿಸಿ ಅವಮಾನಿಸಲು ನಿರಂತರ ಹೆಣಗಾಡುತ್ತದೆ. ಹೀಗಿರುವಾಗ ಹೇಗೆ ಅಗಲಿದವರ ನೆನಪುಗಳಲ್ಲಿ ಜೀವನವನ್ನು ಎಳೆಯಲು ಸಾಧ್ಯ? `ಹುಟ್ಟು ಉಚಿತ ಸಾವು ಖಚಿತ’ ಎನ್ನುವುದನ್ನು ಅರಿತು. ಸಮಾಜದಲ್ಲಿ ಕೌಟುಂಬಿಕ ಜೀವನ ಬೆಸೆಯಲು ವಿಯೋಗ ಹೊಂದಿದ ಸಂಗಾತಿ ಇನ್ನೊಂದು ಹೊಸ ಪಯಣ ಆರಂಭಿಸಿದರೆ ತಪ್ಪಾಗಲಾರದು. ಪ್ರೀತಿ ಪ್ರೇಮದ ಹೆಸರಿನಲ್ಲಿ ಅನೇಕರು ಎಳೆ ಪ್ರಾಯದಲ್ಲೇ ಒಂಟಿಯಾಗಿ ಖಿನ್ನತೆಗೆ ಬಲಿಯಾಗಿ ಕೊರಗುವುದಕ್ಕಿಂತ ‘ಪಾಲಿಗೆ ಬಂದಿದ್ದು ಪಂಚಾಮೃತ’ ಎಂದು ಆಧುನಿಕ ಜೀವಜಗತ್ತಿನಲಿ ಬದುಕಿ ಬಾಳುವುದು ಸೌಖ್ಯ, ಸಮಾಧಾನ ಹಾಗೂ ನೆಮ್ಮದಿ ಅಲ್ಲವೇ…
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.