ಬೆಂಗಳೂರು: ಜಗಜ್ಯೋತಿ ಬಸವಣ್ಣ ಅವರನ್ನು ಶುಕ್ರವಾರ ಶ್ರದ್ಧಾಭಕ್ತಿಯಿಂದ ಸ್ಮರಣೆ ಮಾಡಲಾಯಿತು.
ದಾಸರಹಳ್ಳಿ ವಾರ್ಡ್ ಬಸವವನ ಉದ್ಯಾನದಲ್ಲಿ ಮಾಜಿ ಸಚಿವ ವಿ.ಸೋಮಣ್ಣ ಅವರು ಕಾಯಕ ಯೋಗಿ ಬಸವೇಶ್ವರರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಬಸವೇಶ್ವರರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದಾಗ ಮಾತ್ರ ಸಮಾನತೆ ಸಾಧಿಸಬಹುದು. ಜಾತಿ ನಿರ್ಮೂಲನೆ ಮಾಡಿ ಸಮ ಸಮಾಜ ನಿರ್ಮಾಣ ಮಾಡಬಹುದು ಎಂದು ಸೋಮಣ್ಣ ತಿಳಿಸಿದರು.
ಮಂಡಲ ಅಧ್ಯಕ್ಷ ವಿಶ್ವನಾಥಗೌಡ, ಮಾಜಿ ಪಾಲಿಕೆ ಸದಸ್ಯರಾದ ದಾಸೇಗೌಡ, ಬಿಜೆಪಿ ಮುಖಂಡರಾದ ಶ್ರೀಧರ್, ಎಚ್. ರಮೇಶ್, ವೇಣುಗೋಪಾಲ್, ವಾರ್ಡ್ ಅಧ್ಯಕ್ಷ ಹರೀಶ್ ಉಪಸ್ಥಿತರಿದ್ದರು.
ಬಿಜೆಪಿ: ಅಣ್ಣ ಬಸವಣ್ಣ 12ನೇ ಶತಮಾನದಲ್ಲೇ ಸಮಸಮಾಜದ ನಿರ್ಮಾಣದ ಕನಸು ಕಂಡವರು. ತುಳಿತಕ್ಕೆ ಒಳಗಾದ ಸಮಾಜಕ್ಕೆ ನ್ಯಾಯ ಕೊಡಬೇಕೆಂಬ ಆಶಯವನ್ನು ಹೊಂದಿ ಕಾರ್ಯ ನಿರ್ವಹಿಸಿದ್ದರು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೆನಪು ಮಾಡಿಕೊಂಡರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬಸವಣ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
‘ಬಸವಣ್ಣ ನಿಜಜೀವನದ ಅನುಭವಗಳನ್ನು ವಚನಗಳ ಮೂಲಕ ಸಾಮಾನ್ಯ ಜನರಿಗೂ ತಲುಪುವಂತೆ ಮಾಡಿದ್ದಾರೆ. ವಚನಗಳು ನಮ್ಮ ಜೀವನಕ್ಕೆ ದಾರಿದೀಪ’ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ. ಲಕ್ಷ್ಮಿನಾರಾಯಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಹರೀಶ್, ಮುಖಂಡರಾದ ಚಿ.ನಾ.ರಾಮು, ಕಾರ್ಯಾಲಯ ಸಹ ಕಾರ್ಯದರ್ಶಿ ವಿಶ್ವನಾಥ್ ಭಾಗವಹಿಸಿದ್ದರು.
ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಬಸವಣ್ಣನ ಭಾವಚಿತ್ರಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪುಷ್ಪಾರ್ಚನೆ ಮಾಡಿದರು.