ಬೀದರ್: ‘ತೆಲಂಗಾಣದ ಮಂದಾಕೃಷ್ಣ ಮಾದಿಗ ಅಲ್ಲ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಬಂದರೂ ಮಾದಿಗರು ಬಿಜೆಪಿಗೆ ಮತ ಹಾಕುವುದಿಲ್ಲ’ ಎಂದು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಮುಖಂಡ ಚಂದ್ರಕಾಂತ ಹಿಪ್ಪಳಗಾಂವ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾದಿಗ ಸಮಾಜಕ್ಕೆ ಬಿಜೆಪಿ ಏನೂ ಕೊಡುಗೆ ಕೊಟ್ಟಿಲ್ಲ. ಕಟ್ಟಿಕೊಂಡ ಹೆಂಡತಿಗೆ ಮೋದಿಯವರು ನ್ಯಾಯ ಕೊಟ್ಟಿಲ್ಲ. ಮಾದಿಗರಿಗೆ ಎಲ್ಲಿ ನ್ಯಾಯ ಕೊಡಿಸುತ್ತಾರೆ’ ಎಂದು ಪ್ರಶ್ನಿಸಿದರು.
ಸಮಿತಿ ಮುಖಂಡ ವೆಂಕಟರಾವ್ ವಿಠಲರಾವ್ ಶಿಂಧೆ ಮಾತನಾಡಿ, ‘ಕೇಂದ್ರದ ಬಿಜೆಪಿ ಸರ್ಕಾರ ಸಂವಿಧಾನ ಬದಲಿಸಲು ಹುನ್ನಾರ ನಡೆಸಿದೆ. ಉನ್ನತ ಶಿಕ್ಷಣದಲ್ಲಿ ಮೀಸಲಾತಿ ರದ್ದುಪಡಿಸಿ ಖಾಸಗೀಕರಣಕ್ಕೆ ಮುಂದಾಗಿದೆ. ಹಾಗಾಗಿ ಬಿಜೆಪಿಗೆ ಈ ಸಲದ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು’ ಎಂದು ಮನವಿ ಮಾಡಿದರು.