ಹೈದರಾಬಾದ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯ ತಿರುಚಿದ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಕಾಂಗ್ರೆಸ್ನ ಐವರು ಸೋಷಿಯಲ್ ಮೀಡಿಯಾ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಬಳಿಕ ಜಾಮೀನು ಮೇರೆಗೆ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಇತ್ತೀಚೆಗೆ ಅಮಿತ್ ಶಾ ಅವರ ಹೇಳಿಕೆಯ ತಿರುಚಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು.
ಇಲ್ಲಿನ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಲಾಯಿತು. ಪ್ರತಿ ವ್ಯಕ್ತಿಯು ತಲಾ ₹10 ಸಾವಿರದ ಎರಡು ಶ್ಯೂರಿಟಿ ಆಧಾರದ ಮೇಲೆ ಮತ್ತು ಮುಂದಿನ ಆದೇಶವದರೆಗೆ ಸೋಮವಾರ ಹಾಗೂ ಶುಕ್ರವಾರದಂದು ತನಿಖಾಧಿಕಾರಿ ಎದುರು ಹಾಜರಾಗಬೇಕು ಎಂಬ ಷರತ್ತಿನೊಂದಿಗೆ ಜಾಮೀನು ಮಂಜೂರು ಮಾಡಲಾಯಿತು.
ಚುನಾವಣಾ ಪ್ರಚಾರದ ವೇಳೆ ಸಾರ್ವಜನಿಕ ಸಭೆಯಲ್ಲಿ ಅಮಿತ್ ಶಾ ಮಾಡಿದ ಭಾಷಣವನ್ನು ತಿರುಚಿದ ವಿಡಿಯೊವನ್ನು ಕಾಂಗ್ರೆಸ್ ತನ್ನ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಏಪ್ರಿಲ್ 27ರಂದು ದೂರು ನೀಡಿದ್ದರು. ಇದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಉಲ್ಲಂಘನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಕ್ಷನ್ 469 (ಫೋರ್ಜರಿ), 505(1)ಸಿ (ವದಂತಿ ಹಬ್ಬಿಸುವುದು), 171ಜಿ (ಸುಳ್ಳು ಮಾಹಿತಿ ಹರಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತಿರುಚಿದ ವಿಡಿಯೊ ಮತದಾರರನ್ನು ದಾರಿ ತಪ್ಪಿಸುವ ಗುರಿ ಹೊಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮೊದಲು ಮೀಸಲಾತಿ ಕುರಿತು ಅಮಿತ್ ಶಾ ಹೇಳಿಕೆಯ ತಿರುಚಿದ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 1ರಂದು ವಿಚಾರಣೆಗೆ ಹಾಜರಾಗುವಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ದೆಹಲಿ ಪೊಲೀಸ್ ಸಮನ್ಸ್ ಜಾರಿಗೊಳಿಸಿತ್ತು.