ಪಿಲಿಭಿತ್ (ಉ.ಪ್ರ): ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ತಡೆಯಲು ಕಾಂಗ್ರೆಸ್ ಹಲವು ಪ್ರಯತ್ನಗಳನ್ನು ಮಾಡಿತು. ಪ್ರಾಣ ಪ್ರತಿಷ್ಠಾಪನೆಯ ಆಹ್ವಾನವನ್ನು ತಿರಸ್ಕರಿಸಿ ಭಗವಾನ್ ರಾಮನಿಗೆ ಅವಮಾನ ಮಾಡಿತು ಎಂದು ಪ್ರಧಾನಿ ನರೇಂದ್ರ ಮೋದಿ ದೂರಿದರು.
ಇಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ತುಷ್ಟೀಕರಣದ ಕೆಸರುಗದ್ದೆಯಲ್ಲಿ ಮುಳುಗಿದೆ. ತುಷ್ಟೀಕರಣದ ಒತ್ತಡದಿಂದಾಗಿ, ಕಾಂಗ್ರೆಸ್ ಮತ್ತು ಎಸ್ಪಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ವಿರೋಧಿಸುತ್ತಿವೆ. ಎಸ್ಪಿ-ಕಾಂಗ್ರೆಸ್ನ ಇಂಡಿಯಾ ಮೈತ್ರಿಗೆ ಭಾರತದ ಪರಂಪರೆಯ ಬಗ್ಗೆ ಕಾಳಜಿ ಇಲ್ಲ’ ಆರೋಪಿಸಿದರು.
‘ರಾಮ ಮಂದಿರ ನಿರ್ಮಾಣ ತಡೆಯಲು ಕಾಂಗ್ರೆಸ್ ಹಲವು ಪ್ರಯತ್ನಗಳನ್ನು ಮಾಡಿತು. ಯಾವಾಗ ದೇಶದ ಪ್ರತಿಯೊಬ್ಬರೂ ಪೈಸೆ ಪೈಸೆ ದೇಣಿಗೆ ನೀಡಿದ್ದರಿಂದ ರಾಮ ಮಂದಿರ ನಿರ್ಮಾಣವಾಯಿತೋ, ಜನ ಅವರ ಪಾಪಗಳನ್ನೆಲ್ಲಾ ಮನ್ನಿಸಿ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನಿಸಿದರು. ಆದರೆ ಅದನ್ನು ತಿರಸ್ಕರಿಸಿ ಭಗವಾನ್ ರಾಮನಿಗೆ ಅವಮಾನ ಮಾಡಿದರು. ಪ್ರಾಣಪ್ರತಿಷ್ಠಾಪನೆಗೆ ಹಾಜರಾದವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟಿಸಿದರು. ಅವರ ತಲೆಯಲ್ಲಿ ತುಂಬಿರುವ ವಿಷ ಯಾವುದು ಎಂದು ಇದುವರೆಗೂ ನನಗೆ ತಿಳಿದಿಲ್ಲ’ ಎಂದರು.
‘ರಾಮನನ್ನು ಆರಾಧಿಸುವವರನ್ನು ಪಕ್ಷದಿಂದ ಉಚ್ಚಾಟಿಸುತ್ತಾರೆ. ಇದು ಯಾವ ವಿಧದ ಪಕ್ಷ? ಪಾಪ ಮಾಡಿದ ಈ ಜನರನ್ನು ಕ್ಷಮಿಸಬೇಡಿ’ ಎಂದು ಕರೆಕೊಟ್ಟರು.
‘ದೇಶದ ಪ್ರತಿಯೊಂದು ಕುಟುಂಬವೂ ಅವರವರ ಭಕ್ತಿಗೆ ಅನುಗುಣವಾಗಿ ರಾಮ ಮಂದಿರಕ್ಕೆ ಕೊಡುಗೆ ನೀಡಿದೆ. ಪಿಲಿಭಿತ್ ಜನರು ಅಯೋಧ್ಯೆಗೆ ಬೃಹತ್ ಕೊಳಲನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ, ರಾಮಮಂದಿರ ನಿರ್ಮಾಣಕ್ಕೂ ಮುಂಚೆಯೇ ಇಂಡಿಯಾ ಮೈತ್ರಿಕೂಟದ ಮಂದಿ ದ್ವೇಷವನ್ನು ಹೊಂದಿದ್ದರು. ಅವರು ಇಂದಿಗೂ ದ್ವೇಷ ಹೊಂದಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.