ಬೆಂಗಳೂರು: ʼಬರ ಪರಿಹಾರದ ಹಣ ಬಿಡುಗಡೆಗೆ ಆದೇಶ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿರುವುದು ರಾಜಕೀಯ ಸ್ಟಂಟ್. ಈ ರೀತಿಯ ರಾಜಕೀಯ ಸ್ಟಂಟ್ ಬಿಟ್ಟು ಕೆಲಸ ಮಾಡಲಿʼ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಹೃದಯ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ಚೆನ್ನೈನಿಂದ ಭಾನುವಾರ ಬೆಂಗಳೂರಿಗೆ ವಾಪಸಾದ ಅವರು ಸುದ್ದಿಗಾರರ ಜತೆ ಮಾತನಾಡಿದರು.
ನಮ್ಮ ತೆರಿಗೆ ನಮ್ಮ ಹಣ, ಅನುದಾನ ಕೋರಿ ಸುಪ್ರೀಂ ಕೋರ್ಟ್ಗೆ ಹೋಗುತ್ತೇನೆ ಎನ್ನುವುದೆಲ್ಲ ರಾಜಕೀಯ ಡ್ರಾಮಾ ಎಂದರು.
ʼಮೂರನೇ ಬಾರಿ ನನಗೆ ಶಸ್ತ್ರಚಿಕಿತ್ಸೆ ಆಗಿದೆ. ಇದು ಒಂದು ರೀತಿಯಲ್ಲಿ ಪುನರ್ಜನ್ಮ ಇದ್ದಂತೆ. ನನಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಸಾಯಿಬಾಬಾ ಭಕ್ತರು. ಅವರು ಸಾಯಿಬಾಬಾರಿಗೆ ಪೂಜೆ ಸಲ್ಲಿಸಿ ಬಂದು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ನಿಮಗೆ ಶಸ್ತ್ರಚಿಕಿತ್ಸೆ ನಡೆಸಿರುವುದು ಸಾಯಿಬಾಬಾ ಎಂದು ವೈದ್ಯರು ನನ್ನ ಬಳಿ ಹೇಳಿದರು. ನಾಡಿನ ಲಕ್ಷಾಂತರ ಅಭಿಮಾನಿಗಳ ಹಾರೈಕೆಯಿಂದ ನಾನು ಆರೋಗ್ಯವಾಗಿ ಬಂದಿದ್ದೇನೆʼ ಎಂದು ಹೇಳಿದರು.
ಮೂರರಿಂದ ನಾಲ್ಕು ದಿನಗಳ ಕಾಲ ವಿಶ್ರಾಂತಿ ಪಡೆಯುತ್ತೇನೆ. ನಂತರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತೇನೆ. ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನೂ ಮೂರರಿಂದ ನಾಲ್ಕು ದಿನಗಳೊಳಗೆ ಅಂತಿಮಗೊಳಿಸಲಾಗುವುದು ಎಂದರು.