ಮಾಲ್ಡಾ (ಪಶ್ಚಿಮ ಬಂಗಾಳ): ಪ್ರಧಾನಿ ನರೇಂದ್ರಿ ಮೋದಿ ಅವರು ಆಹಾರ ಪದ್ಧತಿಯನ್ನು ಜನರ ಮೇಲೆ ಹೇರುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಟೀಕಿಸಿದರು.
ಪಶ್ಚಿಮ ಬಂಗಾಳದ ಮಾಲ್ಡಾ ಉತ್ತರ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡ ಅವರು, ‘ಮೋದಿ ಅವರ ಭಾರತದಲ್ಲಿ ಅವರ ಇಚ್ಛೆಯಂತೆ ಆಹಾರ ಸೇವಿಸುವ ಮತ್ತು ಪೂಜೆ ಸಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆರ್ಎಸ್ಎಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು’ ಎಂದು ಆರೋಪಿಸಿದರು.
ರಾಹುಲ್ ಭಾರತದ ಪುತ್ರ: ರಾಹುಲ್ ಗಾಂಧಿ ಅವರು ಭಾರತಕ್ಕಿಂತ ಪಾಕಿಸ್ತಾನದ ಪ್ರಧಾನಿಯಾಗಲು ಸೂಕ್ತ ವ್ಯಕ್ತಿ ಎಂಬ ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿದ ಖರ್ಗೆ, ‘ರಾಹುಲ್ ಅವರು ಭಾರತದ ಪುತ್ರ’ ಎಂದರು.
ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನಕ್ಕೆ ಉಳಿಗಾಲವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗಲಿದ್ದು ಭಾರತವು ಸರ್ವಾಧಿಕಾರಿಯ ಆಳ್ವಿಕೆಗೆ ಒಳಪಡಲಿದೆ.ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
‘ರಾಹುಲ್ ಏಕೆ ಪಾಕಿಸ್ತಾನದ ಪ್ರಧಾನಿ ಆಗಬೇಕು? ಅವರ ಕುಟುಂಬವು ಈ ದೇಶಕ್ಕಾಗಿ ಎಲ್ಲ ತ್ಯಾಗಗಳನ್ನೂ ಮಾಡಿದೆ’ ಎಂದು ಪ್ರತಿಪಾದಿಸಿದರು.
ಚುನಾವಣಾ ಬಾಂಡ್ ಮೂಲಕ ದೇಣಿಗೆ ಪಡೆದ ಬಿಜೆಪಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವುದೇ ಹಕ್ಕು ಇಲ್ಲ ಎಂದ ಅವರು, ‘ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿಕೊಂಡು ಬಿಜೆಪಿಯನ್ನು ದೊಡ್ಡ ಲಾಂಡ್ರಿಯನ್ನಾಗಿ ಬದಲಾಯಿಸಿದ್ದಾರೆ. ಕಮಲ ಪಾಳಯವಯ ಎಲ್ಲರ ಭ್ರಷ್ಟಾಚಾರದ ಕೊಳೆಯನ್ನು ತೊಳೆಯುವ ವಾಷಿಂಗ್ ಮಷಿನ್ ಆಗಿದೆ’ ಎಂದು ಲೇವಡಿ ಮಾಡಿದರು.
ಬಿಳಿ ಉಡುಪು ಸರಳತೆಯ ಪ್ರತೀಕ: ರಾಹುಲ್
ನವದೆಹಲಿ: ‘ಬಿಳಿ ಬಟ್ಟೆಯು ಪಾರದರ್ಶಕತೆ ಮತ್ತು ಸರಳಕತೆಯ ಪ್ರತೀಕ. ಆದ್ದರಿಂದ ಯಾವಾಗಲೂ ಬಿಳಿ ಬಟ್ಟೆಯನ್ನೇ ಧರಿಸುತ್ತೇನೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಅವರು ಕರ್ನಾಟಕದಲ್ಲಿ ಪ್ರಚಾರದ ವೇಳೆ ತಮಗೆ ಎದುರಾದ ಪ್ರಶ್ನೆಗಳಿಗೆ ಉತ್ತರಿಸುತ್ತಿರುವ ಎರಡು ನಿಮಿಷಗಳ ವಿಡಿಯೊವನ್ನು ಕಾಂಗ್ರೆಸ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ತಾವು ಧರಿಸುವ ಉಡುಪಿನ ಕುರಿತ ಪ್ರಶ್ನೆಗೆ ಅವರು ಈ ಮೇಲಿನಂತೆ ಉತ್ತರಿಸಿದ್ದಾರೆ.
‘ನಾನು ತೊಡುವ ಬಟ್ಟೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಸರಳವಾಗಿ ಕಾಣಲು ಬಯಸುವೆ’ ಎಂದಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಭಾರತ್ ಜೋಡೊ ಯಾತ್ರೆ ನಡೆಸಿದ ಬಳಿಕ ಬಿಳಿ ಬಟ್ಟೆಯು ರಾಹುಲ್ ಅವರ ‘ಟ್ರೇಡ್ಮಾರ್ಕ್’ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.