ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

HD ರೇವಣ್ಣಗೆ ಮತ್ತೊಂದು ಸಂಕಷ್ಟ: ಮಹಿಳೆ ಅಪಹರಣ ಕೇಸ್ ದಾಖಲು– ಸತೀಶ್ ಬಾಬಣ್ಣ ಬಂಧನ

ಮೈಸೂರು ಜಿಲ್ಲೆಯ ‌ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ
Published 3 ಮೇ 2024, 7:34 IST
Last Updated 3 ಮೇ 2024, 7:34 IST
ಅಕ್ಷರ ಗಾತ್ರ

ಮೈಸೂರು: ಲೈಂಗಿಕ ದೌರ್ಜನ್ಯದ ಪ್ರಕರಣ ಎದುರಿಸುತ್ತಿರುವ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆಯನ್ನು ಅಪಹರಿಸಿದ ಆರೋಪದ ಮೇಲೆ ಮೈಸೂರು ಜಿಲ್ಲೆಯ ‌ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲೂ ಎಚ್.ಡಿ. ರೇವಣ್ಣ ಮೊದಲ ಆರೋಪಿ (ಎ1) ಹಾಗೂ ಕೆ.ಆರ್. ನಗರ ತಾಲ್ಲೂಕಿನ ಹೆಬ್ಬಾಳು‌ ಕೊಪ್ಪಲಿನ‌ ಸತೀಶ್ ಬಾಬಣ್ಣ ಎರಡನೇ ಆರೋಪಿಯಾಗಿದ್ದಾರೆ.

ಸಂತ್ರಸ್ತೆಯ ಪುತ್ರ ನೀಡಿದ ದೂರಿನಲ್ಲೇನಿದೆ?

ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಾಯಿಯನ್ನು ಅಪಹರಿಸಿದ್ದಾರೆ ಎಂದು ಸಂತ್ರಸ್ತೆಯ ಪುತ್ರ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.

'ನನ್ನ ತಾಯಿ ಆರು ವರ್ಷದಿಂದ ಹೊಳೆನರಸೀಪುರದ ಚೆನ್ನಾಂಬಿಕ ಥಿಯೇಟರ್ ಬಳಿ ಇರುವ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ 3 ವರ್ಷದಿಂದ ಅಲ್ಲಿ ಕೆಲಸ ಬಿಟ್ಟಿದ್ದು, ಊರಿನಲ್ಲಿ ಕೂಲಿ ಮಾಡುತ್ತಿದ್ದರು. ಲೋಕಸಭಾ ಚುನಾವಣೆ ಸಮಯದಲ್ಲಿ ಭವಾನಿ ಅವರು ಮತ್ತೆ ಕೆಲಸಕ್ಕೆ ಕರೆದಿದ್ದಾರೆಂದು ಹೇಳಿ ಹೆಬ್ಬಾಳಕೊಪ್ಪಲಿನ ಸತೀಶ್ ಬಾಬಣ್ಣ ನನ್ನ ತಾಯಿಯನ್ನು ಕರೆದುಕೊಂಡು ಹೋಗಿದ್ದರು' ಎಂದು ತಿಳಿಸಿದ್ದಾರೆ.

'ಚುನಾವಣೆಯ ದಿನ ತಾಯಿಯನ್ನು ಮತ್ತೆ ಮನೆಗೆ ಕರೆದುಕೊಂಡು ಬಂದು ಬಿಟ್ಟಿದ್ದರು. ನಂತರ ಏ.29ರಂದು ರಾತ್ರಿ ಮನೆಗೆ ಬಂದ ಬಾಬಣ್ಣ ನಿಮ್ಮ ತಾಯಿ ಪೊಲೀಸರಿಗೆ ಸಿಕ್ಕರೆ ಪ್ರಕರಣ ದಾಖಲಾಗುತ್ತದೆ. ಅವರನ್ನು ರೇವಣ್ಣ ಸಾಹೇಬರು ಕರೆದುಕೊಂಡು ಹೋಗಲು ತಿಳಿಸಿದ್ದಾರೆಂದು ಹೇಳಿ ಒತ್ತಾಯದಿಂದ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ' ಎಂದು ಆರೋಪಿಸಿದ್ದಾರೆ.

'ಏ.1ರಂದು ನನ್ನ ಸ್ನೇಹಿತರು ಕೆಲವರು ಮನೆಗೆ ಬಂದು, ನಿನ್ನ ತಾಯಿಯ ವಿಡಿಯೊ ಮೊಬೈಲ್ ಫೋನ್‌ನಲ್ಲಿ ಹರಿದಾಡುತ್ತಿದೆ. ನಿನ್ನ ತಾಯಿ ಕೈ ಮುಗಿದರೂ ಪ್ರಜ್ವಲ್ ಅಣ್ಣ ಬಲತ್ಕಾರ ಮಾಡಿರುವ ದೃಶ್ಯ ವಿಡಿಯೊದಲ್ಲಿದೆ. ಆ ಬಗ್ಗೆ ದೊಡ್ಡ ಪ್ರಕರಣವೂ ದಾಖಲಾಗಿದೆ ಎಂದರು. ಆಗ, ಬಾಬಣ್ಣ ಅವರಿಗೆ ಕರೆ ಮಾಡಿ ತಾಯಿಯನ್ನು ಕರೆದುಕೊಂಡು ಬನ್ನಿ ಎಂದು ತಿಳಿಸಿದೆ. ಅವರು, ಈ ಹಿಂದೆ ರೇವಣ್ಣ ಸಾಹೇಬರ ಮಗ ಬೇರೆಯವರೊಂದಿಗೆ ಗಲಾಟೆ ಮಾಡಿದಾಗ ನಿಮ್ಮ ತಾಯಿಯೂ ದೊಣ್ಣೆ ಹಿಡಿದು ನಿಂತಿರುವ ಫೋಟೊ ಬಂದಿದೆ. ಹೀಗಾಗಿ ಅವರ ಮೇಲೂ ಎಫ್.ಐ.ಆರ್. ದಾಖಲಾಗಿದೆ. ಇನ್ನು ಜಾಮೀನಿನ ಮೇಲೆ ಬಿಡಿಸಿಕೊಂಡು ಬರಬೇಕು ಎಂದರು.

ನಮ್ಮ ಮೇಲೆ ಪ್ರಕರಣ ದಾಖಲಾಗುತ್ತದೆ ಎಂದು ಸುಳ್ಳು ಹೇಳಿ ತಾಯಿಯನ್ನು ಒತ್ತಾಯದಿಂದ ಕರೆದೊಯ್ದು ನಮಗೆ ಗೊತ್ತಿಲ್ಲದ ಕಡೆ ಕೂಡಿಹಾಕಿದ್ದಾರೆ.‌ ನನ್ನ ತಾಯಿಯ ಜೀವಕ್ಕೆ ತೊಂದರೆ ಇದೆ. ತಾಯಿಯನ್ನು ಕರೆದೊಯ್ಯಲು ಹೇಳಿದ ರೇವಣ್ಣ ಹಾಗೂ ಕರೆದೊಯ್ದ ಸತೀಶ್ ಬಾಬಣ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ದೂರಿನಲ್ಲಿ ಕೋರಿದ್ದಾರೆ.

ಪ್ರಕರಣದ 2ನೇ ಆರೋಪಿ‌ ಸತೀಶ್ ಬಾಬಣ್ಣ ಅವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT