ಕಬ್ಬಿನ ಬೆಳೆಗಳಿಂದ ಈ ಹಿಂದೆಲ್ಲ ಸಂಕಷ್ಟಕ್ಕೆ ಸಿಲುಕಿರುವ ಬೆಳಗಾವಿಯ ಅನೇಕ ರೈತರು ಈಗ ತರಕಾರಿ ಬೆಳೆಗಳ ಮೊರೆ ಹೋಗಿದ್ದಾರೆ. ಇಂಥ ರೈತರ ಪೈಕಿ, ಇರುವ 15 ಗುಂಟೆ ಜಾಗದಲ್ಲಿಯೇ ವಿಭಿನ್ನ ತರಕಾರಿ ಬೆಳೆದು ಆದಾಯ ಗಳಿಸುತ್ತಿರುವ ಬಾಬು ಬಿಸಿರೊಟ್ಟಿ ವಿಭಿನ್ನವಾಗಿ ಕಾಣುತ್ತಾರೆ.
ಮುಖ್ಯವಾಗಿ ಹಾಗಲಕಾಯಿ ಕೃಷಿಯನ್ನು ಮಾಡುತ್ತಿರುವ ಬಾಬು, ಇದರ ನಡುವೆ ಮಿಶ್ರಬೆಳೆಗಳಾಗಿ ಬೀನ್ಸ್, ಹಾಗೂ ಬೀಟ್ರೂಟ್ ಬೆಳೆದು ವಾರ್ಷಿಕವಾಗಿ ಇವರು 2 ಲಕ್ಷದವರೆಗೂ ಆದಾಯ ಪಡೆಯುತ್ತಿದ್ದಾರೆ.
ಕಳೆದ ವರ್ಷ ಜುಲೈ ತಿಂಗಳಲ್ಲಿ ಹಾಗಲ ಸಸಿಗಳನ್ನು ನೆಟ್ಟು ಹನಿ ನೀರಾವರಿ ಅಳವಡಿಸಿ ಅಚ್ಚುಕಟ್ಟಾದ ಹಂದರ ನಿರ್ಮಾಣ ಮಾಡಿದ್ದಾರೆ. ‘ಮೋಡ ಕವಿದ ವಾತವರಣವಿದ್ದರೆ ಮಾತ್ರ ಹಾಗಲಕಾಯಿ ಬೆಳೆಗೆ ರೋಗಗಳ ಬಾಧೆ. ಇವು ಗಳನ್ನು ಸುಲಭದಲ್ಲಿ ಔಷಧಿ ಸಿಂಪಡಿಸಿ ನಿವಾರಿಸಬಹುದು’ ಎನ್ನುತ್ತಾರೆ.
ಸ್ವಲ್ಪ ಚೆನ್ನಾಗಿ ಈ ಸಸಿಗಳನ್ನು ನೋಡಿಕೊಂಡರೆ ಎರಡು ತಿಂಗಳಲ್ಲೇ ಬೆಳೆ ಕೊಯ್ಲಿಗೆ ತಯಾರಾಗುತ್ತದೆ’ ಎಂದು ಅನುಭವ ಹಂಚಿಕೊಳ್ಳುತ್ತಾರೆ ಅವರು. ಇವರ ಬಳಿ ಸ್ವಂತ ವಾಹನ ಇರುವ ಕಾರಣ ಕೊಲ್ಲಾಪುರ, ಬೆಳಗಾವಿ ಮಾರುಕಟ್ಟೆಗಳಿಗೆ ಇದನ್ನು ಸಾಗಿಸುತ್ತಾರೆ.