ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ–ಕಾಲಗಳು ಒಂದಾಗಿ, ಊರಾಗಿ...

Last Updated 21 ಮೇ 2016, 19:51 IST
ಅಕ್ಷರ ಗಾತ್ರ

ಕರ್ನಾಟಕದ ಜಾನಪದ ಕಲೆಗಳ ಅಧ್ಯಯನಕ್ಕೆ ಎಚ್‌.ಎಲ್‌. ನಾಗೇಗೌಡರು ರೂಪಿಸಿದ ‘ಜಾನಪದ ಲೋಕ’ ಒಂದು ಆಕರ. ಇದನ್ನು ಹೋಲುವಂತಹುದೇ ಕೆಲಸವನ್ನು ವಿಜಯನಾಥ ಶೆಣೈ ಅವರು ಮಣಿಪಾಲದಲ್ಲಿ ಮಾಡಿದ್ದಾರೆ. ಅವರ ‘ಹೆರಿಟೇಜ್‌ ವಿಲೇಜ್‌’ ದೇಶವಿದೇಶಗಳ ಕಲಾಸಕ್ತರ ಪಾಲಿಗೆ ಚುಂಬಕ ಕೇಂದ್ರ.

ಶೆಣೈ ಅವರ ಸಾಂಸ್ಕೃತಿಕ ಸಾಧನೆಗೆ ಇತ್ತೀಚೆಗೆ (ಮೇ 14ರಂದು ) ‘ಎಚ್‌.ಎಲ್‌. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ’ ಸಂದಿದೆ. ಈ ಮೂಲಕ ಕನ್ನಡ ಸಂಸ್ಕೃತಿ ಎಂದೂ ಮರೆಯದ ಇಬ್ಬರು ಸಾಧಕರು ಒಂದು ಚೌಕಟ್ಟಿಗೆ ಸೇರ್ಪಡೆಯಾದುದು ಒಂದು ವಿಶೇಷ ಸಂಗತಿ.

ಕಳೆದುಹೋದ ಬಾಲ್ಯವನ್ನು, ಕಳೆದುಹೋದ ನಮ್ಮ ಒಟ್ಟು ಕುಟುಂಬವನ್ನು, ಇಡಿ ಇಡಿಯಾಗಿ ಸಕಲ ಹೊಣೆಗಾರಿಕೆಯನ್ನು, ಸಂಸಾರಗಳನ್ನು ಸಲುಹುತ್ತಿದ್ದ  ಅಂದಿನ ವಿಸ್ತಾರವಾದ ಮನೆಗಳು, ಇಂದಿನ ಹಿರಿ ತಲೆಗಳಲ್ಲಿ ನೆನಪಿನ ಭಾವಕೋಶವಾಗಿವೆ.

ಆ ಮನೆಗಳು ನೆಲಮೂಲದ ವಸ್ತುಗಳ ಬಳಕೆಯಿಂದ ಹಾಗೂ ಸರಳವಾದ ಕೈ ಕೆಲಸಗಳ ಕಲಾತ್ಮಕತೆಯಿಂದ ಕೂಡಿರುತ್ತಿದ್ದವು. ಸ್ಥಳದಲ್ಲೇ ಸಿಗುವ ಸಲಕರಣೆಗಳಿಂದ ನಿರ್ಮಿಸಿದ ಇಂಥ ಮನೆಗಳು ಬಾಳಿಕೆಯಿಂದಲೂ ಸ್ಥಳದ ಅನುಕೂಲತೆಯಿಂದಲೂ ಅಲ್ಲಿನ ಪರಿಸರಕ್ಕೆ ಹೊಂದಿಕೆಯಾಗಿರುತ್ತಿದ್ದವು.

ಅದರಲ್ಲೂ ಊರಿನ ಪ್ರಮುಖರ ಮನೆಗಳು ವಿಶೇಷವಾದ ಅನುಕೂಲ – ಅಲಂಕಾರಗಳಿಂದ ಕೂಡಿರುತ್ತಿದ್ದವು. ಇಂದಿನ ವಾಸ್ತುಶಿಲ್ಪಕ್ಕೆ ಕಡಿಮೆಯಿಲ್ಲದಂತೆ ಅಂದಿನ ‘ಹಸ್ತಶಿಲ್ಪ’ ಹಸಿರು ಪರಿಸರದಲ್ಲಿ ಕಂಗೊಳಿಸುತ್ತಿತ್ತು. 

ಕೂಡುಕುಟುಂಬಗಳನ್ನು ಪೊರೆಯುತ್ತ, ನೆಂಟರಿಷ್ಟರನ್ನು ಆದರಿಸುತ್ತ, ಆಳುಕಾಳುಗಳನ್ನು ಸಲಹುತ್ತ, ಅಂಗಳಗಳು ಸಮೂಹದ ವೇದಿಕೆಯಾಗಿಯೂ ಮಾರ್ಪಾಡಾಗುತ್ತಿದ್ದವು. ಊರಿನ ದೊಡ್ಡಮನೆಗಳು ಮದುವೆ ಮಂಟಪಗಳಾಗುತ್ತಿದ್ದವು.

ಗಡಿಬಿಡಿಯಿಲ್ಲದ ಅಂದಿನ ಬದುಕಿನ ಭಾಗವಾಗಿದ್ದ ಅಂಗಳ, ನಡುಮನೆ, ಚಾವಡಿಮನೆಗಳು, ಎಲ್ಲಿ ಕಳೆದುಹೋದವು? ಒಲೆಯ ಸುಡುಬೆಂಕಿಯಲ್ಲಿ ಬೇಯುತ್ತಿದ್ದ ಮಡಿಕೆ ಕುಡಿಕೆಗಳು, ಪಾತ್ರೆ ಪಡಗಗಳು, ಬಾಣಂತಿ ಮನೆಯ ತೊಟ್ಟಿಲು, ತೊಟ್ಟಿಲಿನ ಹಗ್ಗ, ಮಗುವಿನ ಗುಬ್ಬಿಗೂಡು, ಅದನ್ನು ನೇದ ಕೈಗಳ ಕಡಗಗಳು, ಮಗುವಿನ ಕಾಲ್ಗೆಜ್ಜೆ, ಕಳುಹಲು ಬಂದ ತವರಿನ ಗಾಡಿ, ಗಾಡಿ ಎತ್ತಿನ ಹೆಜ್ಜೆಗೆ ಕುಣಿವ ಗಂಟೆಗಳು– ಇವೆಲ್ಲವೂ ದಿನಗಳನ್ನು ದೂಡಿಕೊಂಡು ಸವೆದು ಕತ್ತಲೆಯ ಅಟ್ಟ ಸೇರಿವೆ.

ಅಂದಿನ ಹಗುರವಾದ ಬದುಕಲ್ಲಿ ದನದ ಬಾಯಾರಿಕೆಗೆಂದೇ ಇಟ್ಟ ನೀರ ಬಾನಿಗಳು ಹಾಳುಬಿದ್ದ ಮನೆಯ ಕಿಳ್ಳುಗಳಲ್ಲಿ ಇಂದು ಭಾರವಾಗಿ ಹಾರು ಹೊಡೆದಿವೆ.

ಬದುಕು ಚಿಕ್ಕದಾಗುತ್ತ, ಬಂದ ಗಿಲೀಟಿನ ಸಾಮಾನುಗಳಿಂದ ಮನೆಗಳು ಬದಲಾಗುತ್ತಾ ಮನೋಭಾವವೂ ಬದಲಾಗುತ್ತಾ ಸತ್ತವರೊಂದಿಗೆ ಅವರ ವಸ್ತುಗಳು ಒಂದೊಂದೇ ಕಣ್ಮರೆಯಾಗಿ ಹೋಗುವಂತೆ– ಒಂದೊಂದೇ ಬಿದ್ದ ಮನೆಗಳ ಕೆತ್ತನೆಯ ಕಂಬಗಳು, ದಾರಂದ, ಮಾಡು ಮಣ್ಣಾಗತೊಡಗಿದವು. ಅಮೂಲ್ಯ ಹಸ್ತಶಿಲ್ಪಗಳು ಚದುರತೊಡಗಿದವು.

ನೆಲಕ್ಕೆ ಬಿದ್ದ ಹಿರಿಯರ ಒಂದೊಂದೇ ಆಸೆಗಳನ್ನು ಆರಿಸಿತಂದು ಮೈತಡವಿ, ಅವುಗಳ ಕಲಾತ್ಮತೆಗೆ ಬೆರಗಾಗಿ, ಬಾಲ್ಯದ ಕನಸಿನ ಲೋಕವೊಂದು ಮರೆಯಾಗಿಬಿಡುತ್ತದಲ್ಲಾ!– ಎನ್ನುವ ಕಳಕಳಿಯಿಂದ, ಅಮೂಲ್ಯ ಕೈಕುಸುರಿಗಳನ್ನು ಆಸ್ಥೆಯಿಂದ ಜೋಡಿಸುತ್ತ, ಮುರಿದ ಮನೆಯನ್ನು ತಿರುಗಿ ಕಟ್ಟುತ್ತಲೇ ಅದರ ಬಾಳಿಕೆಯ ಮೋಹಕ್ಕೆ ಒಳಗಾದವರು ವಿಜಯನಾಥ ಶೆಣೈ. ಸುಮಾರು ನಲವತ್ತು ವರ್ಷಗಳಿಂದ ತಾವಿದ್ದಲ್ಲೇ ಸಾಂಸ್ಕೃತಿಕ ಸಮೂಹವನ್ನು ಕಟ್ಟಿ ನಿಲ್ಲಿಸಿದ ಮಾಂತ್ರಿಕ ಇವರು.

ಮುರಿದ ಮನೆಗಳನ್ನು ಹಾಗೂ ನಿರ್ವಹಿಸಲಾರದ ಕಟ್ಟಡಗಳನ್ನು ಜಾಗರೂಕತೆಯಿಂದ ವಹಿಸಿಕೊಂಡು, ಪರೀಕ್ಷಿಸಿ, ಕಟ್ಟಡದ ನಾಡಿ ಮಿಡಿತ ಹಿಡಿದು, ಮುಂದಿನ ಕೆಲಸಕ್ಕೆ ಕೈ ಹಚ್ಚುವ ಕಸುಬುದಾರಿಕೆ ಶೆಣೈ ಅವರದು.

ಅನುಭವಿ ವೈದ್ಯರಂತೆ ಅಳಿದ ಮನೆಗಳನ್ನು ಕರಾರುವಾಕ್ಕಾಗಿ ಜೋಡಿಸಿದ ಅಗ್ಗಳಿಕೆ ಅವರದು. ಹತ್ತಾರು ಮನೆಗಳ ಗುಚ್ಛ ಅವರ ಕೈಯಲ್ಲಿ ಇನ್ನೂ ಸುಧಾರಣೆಗೊಂಡು, ಒಂದು ಊರಾಗಿ ಮಣಿಪಾಲದಲ್ಲಿ ನೆಲೆ ನಿಂತಿದೆ.

ಭಗೀರಥ ಪ್ರಯತ್ನ
ವಿಜಯನಾಥ ಶೆಣೈ ಅವರ ಭಗೀರಥ ಪ್ರಯತ್ನದಲ್ಲಿ ಹಳೆಯ ವಾಸ್ತುಶಿಲ್ಪಗಳ ಒಂದೊಂದೇ ಜಂತಿ, ಕಂಬ, ಕಿಟಕಿ, ಬಾಗಿಲು, ಕಲಾತ್ಮಕ ವಸ್ತುಗಳು ಸಂಗ್ರಹವಾಗುತ್ತಾ ಕಲಾಕೃತಿಯಾಗಿ ಅರಳಿವೆ. ಈ ಭಗೀರಥನ ಕಲೆಗಾರಿಕೆಯಲ್ಲಿ ಸ್ವಂತಕ್ಕೊಂದು ಕಲಾತ್ಮಕ ಸೂರು ಅರಳಿದೆ. ಆದರೆ, ತಮ್ಮ ಪ್ರಯತ್ನ ಇಷ್ಟಕ್ಕೆ ನಿಲ್ಲಬಾರದು ಎನ್ನುವ ಅವರ ತುಡಿತ–ಕಾಳಜಿ ‘ಹಸ್ತಶಿಲ್ಪ ಟ್ರಸ್ಟ್‌’ ರೂಪುಗೊಳ್ಳಲು ಕಾರಣವಾಯಿತು.

ಅವರು ಸ್ವಂತಕ್ಕಾಗಿ ಕಟ್ಟಿದ ಮನೆ ಅದರ ಕಾರ್ಯಾಗಾರವಾಯಿತು. ಸ್ನೇಹಿತರ ಒತ್ತಾಯದ ಮೇರೆಗೆ ಅವರೇ ಖರೀದಿಸಿದ ಇನ್ನೊಂದು ಮನೆಗೆ ಸಂಸಾರ ನೆಲೆಯಾಯಿತು. ಇಲ್ಲಿಂದ ಅವರು ತಮ್ಮ ಕನಸಿಗೆ ಸಂಪೂರ್ಣ ತೆರೆದುಕೊಂಡರು. ಇವರ ಕೆಲಸದ ಜೊತೆಗೆ ಆಸಕ್ತ ಹಣವಂತರು, ಸರ್ಕಾರಿ ಅಧಿಕಾರಿಗಳು, ಮಾಧ್ಯಮ ಮಿತ್ರರು ಜೊತೆಯಾದರು.

ಸರ್ಕಾರದಿಂದ ಆರು ಎಕರೆ ಜಮೀನು ಮಂಜೂರಾಯಿತು. ಹೊರ ದೇಶದ ಸಂಸ್ಥೆಗಳ ನೆರವು ಸಿಕ್ಕಿತು. ಜಾಗರೂಕ ಮನಸ್ಸಿನ ಶೆಣೈ ಅವರ ಲೆಕ್ಕಾಚಾರ ಹಾಗೂ ತಾಳ್ಮೆಯಿಂದ ವರ್ಷಗಟ್ಟಲೆ ಹಳೆಯ ಊರೊಂದು ರೂಪುಗೊಂಡಿತು.

‘ಹೆರಿಟೇಜ್‌ ವಿಲೇಜ್‌’ ರೂಪಿಸಲು ಶೆಣೈ ಅವರು ಪಟ್ಟ ಕಷ್ಟ ಒಂದೆರಡಲ್ಲ. ದಾರಿ ತಿಳಿಯಬಾರದೆಂಬ ಉದ್ದೇಶದಿಂದ ಕಣ್ಣು ಕಟ್ಟಿ ಕರೆದುಕೊಂಡ ಹೋದ ದಲ್ಲಾಳಿಗಳೊಂದಿಗೆ, ಕೋವಿ ಹಿಡಿದೆ ಮಾತನಾಡುವ ವ್ಯಕ್ತಿಯೊಂದಿಗೆ ವ್ಯವಹರಿಸಬೇಕಾಯಿತು.

ಅವರು ತುಳಿದ ಸಾವಿರ ಸಾವಿರ ಮನೆಯ ಹಾದಿಗಳು ಸಾವಿರಾರು ಕಥೆಗಳನ್ನು ಅವರೊಳಗೆ ಹರವಿಕೊಂಡ, ಅವರೇ ಕಥಾನುಭವದ ಕಣಜವಾಗಿ ಹೋಗಿದ್ದಾರೆ. ಚಾರಿತ್ರಿಕ ಸಂಗತಿಗಳು, ಹೆಣ್ಣು ಮಕ್ಕಳ ಹಾಡುಹಸೆ ಅವರಲ್ಲಿ ದಾಖಲಾಗಿವೆ.

ಅವರ ಸಂಗ್ರಹದಲ್ಲಿರುವ ಶಾನುಭೋಗರ ಮನೆಯ ವೀಣೆ ನುಡಿ, ಪಾದ್ರಿಗಳ ಪಿಯಾನೊ, ದಿವಾನರ ಮನೆಯ ನೃತ್ಯರಂಗದಲ್ಲಿ ಬೀಸುವ ಬೀಸಣಿಕೆಗಳು, ಯಂತ್ರ ಯುಗಕ್ಕೆ ಕಾಲಿಡುವ ಮುನ್ನಿನ ದಿನದ ತಂತ್ರಗಾರಿಕೆಯನ್ನು ಪರಿಚಯಿಸುತ್ತವೆ.

ಸ್ಮೃತಿಗಳ ಸಂಕಲನ
ಹತ್ತೊಂಬತ್ತನೇ ಶತಮಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ ಸಮುದಾಯ, ಶಾನುಭೋಗರು, ಕೊಡವ ಜನಾಂಗದ ಪ್ರಮುಖರು, ಮಲೆನಾಡ ಗೌಡರು ಹಾಗೂ ಬಯಲು ಸೀಮೆಯ ಸಾಹುಕಾರರ ಸುತ್ತ ಸಾಂಸ್ಕೃತಿಕ ಪ್ರಭಾವಳಿಯೊಂದು ರೂಪುಗೊಳ್ಳುತ್ತಿತ್ತು.

ಇದಕ್ಕೆ ತಕ್ಕಹಾಗೆ ಅವರ ಮನೆಗಳೂ ಶ್ರೀಮಂತವಾಗಿರುತ್ತಿದ್ದವು. ಮನೆಯೊಳಗಿನ ಸಮೃದ್ಧಿ, ಸರಳವಾದ ರೈತನ ಬದುಕಿನಿಂದಾಚೆಗೆ ಇನ್ನೇನೋ ಬೇಡಿಕೆಗಳು, ಈ ವಿಸ್ತಾರವಾದ ಮನೆಗೆ ಕಾರಣವಾಗಿವೆ. ಸೀಮಿತ ಪ್ರದೇಶಗಳಿಗೆ ರಾಜರಂತೆ ಇರುತ್ತಿದ್ದ ಕಾರಣ ಅವರ ನೆಂಟಸ್ತಿಕೆಗೆ ತೂಗುವ ಇನ್ನೊಂದು ಗಟ್ಟಿ ಕುಳವನ್ನು ಹಿಡಿಯಲು ಕೂಡ ಮನೆಮಾರು ಆಕರ್ಷಣೆಯಾಗಿದ್ದವು.

ಇಂಥ ಸಾಂಪ್ರದಾಯಿಕ ಮನೆಗಳು ಕಾಲದ ಹೊಡೆತಕ್ಕೆ ಸಿಕ್ಕಿ ನಲುಗತೊಡಗಿದಾಗ, ಅವುಗಳನ್ನು ಪುನರ್ ರಚಿಸುವ ಮೂಲಕ ಅಂದಿನ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನ ವಿಜಯನಾಥ ಶೆಣೈ ಅವರದು.

ಎಲ್ಲೆಲ್ಲಿಂದಲೋ ಬಂದು ತಳವೂರಿರುವ ಹಂಗರಕಟ್ಟೆ ಬಾಣಸಾಲೆ ಮನೆ, ಬೈಂದೂರು ನೆಲ್ಲ್ಯಾಡಿ ಮನೆ, ಕುಂಜೂರು ಚೌಕಿ ಮನೆ, ಹರ್ಕೂರು ಒಳಗಿನ ಮನೆ, ಶೃಂಗೇರಿ ಮನೆ, ಮಂಗಳೂರು ಕ್ರಿಶಿಯನ್ ಹೌಸ್, ಜಂಗಮ ಮಠ, ಭಟ್ಕಳದ ಮುಸ್ಲಿಮರ ಮನೆ, ವಿದ್ಯಾಮಂದಿರ– ಹೀಗೆ ವೈವಿಧ್ಯ ಮನೆಗಳು ಶೆಣೈ ಅವರ ‘ಹೆರಿಟೇಜ್ ವಿಲೇಜ್‌’ನಲ್ಲಿ ಬೀಡುಬಿಟ್ಟಿವೆ. ಅದರ ಜೊತೆಯಲ್ಲಿ ವಿಧವಿಧವಾದ ಕೈ ಕುಸುರಿಯ ಕಾಣ್ಕೆಗಳು, ವ್ಯಾವಹಾರಿಕ ಜಗತ್ತಿನ ಕುರುಹುಗಳು ಕೂಡ ಹಳೆಯ ಕಥೆಗಳನ್ನು ಹೇಳುತ್ತಿವೆ.

ಜಮೀನ್ದಾರರು, ವ್ಯಾಪಾರಿಗಳ ಮನೆಗಳು ಮಾತ್ರವಲ್ಲ, ರಾಜರ ಮನೆಗಳು ಕೂಡ ಇಲ್ಲಿ ಸ್ಥಾನ ಪಡೆದಿವೆ. ಕುಕುನೂರಿನ ಕಮಲ ಮಹಲ್, ದೆಕ್ಕನಿಯ ನವಾಬರ ಮನೆ, ಮುಧೋಳದ ಅರಮನೆಯ ದರ್ಬಾರ್ ಹಾಲ್, ಮರುರೂಪ ಪಡೆದಿವೆ. ತಂಜಾವೂರಿನ ಅಮೂಲ್ಯ ಕಲಾಕೃತಿಗಳಂತೂ ತಮ್ಮ ಬೆಲೆ ಮರೆತು ಶಿಸ್ತಾಗಿ ವಸ್ತುಪ್ರದರ್ಶನಕ್ಕೆ ಮುಕ್ತವಾಗಿವೆ.

ರಾಜಾ ರವಿವರ್ಮರ ಕಲ್ಲಚ್ಚುಗಳು, ಉಳಿದುಹೋದ ಬಣ್ಣದ ಪುಡಿ ಇಲ್ಲಿ  ನೋಡುಗರ ಜೊತೆ ಮಾತಿಗಿಳಿದಿವೆ. ಕಿನ್ನಾಳದ ಕಲಾಕೃತಿಗಳು, ಮಣ್ಣಿನ–ಮರದ ಗೊಂಬೆಗಳು, ಗಂಜೀಫಾ ಕಲಾಕೃತಿಗಳು, ತೊಗಲು ಗೊಂಬೆಗಳು– ಇವೆಲ್ಲ ನೆಲಮೂಲದ ನಂಬಿಕೆಗಳೊಂದಿಗೆ ಮಿಳಿತಗೊಂಡು ನೈಜವಾಗಿ ತೋರುತ್ತವೆ.

ಶೆಣೈ ಗರಡಿಯಲ್ಲಿ ರೂಪುಗೊಂಡಿರುವ ಮಣಿಪಾಲದಲ್ಲಿನ ‘ಹೆರಿಟೇಜ್‌ ವಿಲೇಜ್‌’ಗೆ ವಿದೇಶಿ ವಿದ್ಯಾರ್ಥಿಗಳು ಅಧ್ಯಯನಕ್ಕೆ ಬಂದುಹೋಗಿದ್ದಾರೆ. ಈ ಕಲಾಸಂಪುಟ ದೇಶವಿದೇಶಗಳ ಕಲಾವಿದರನ್ನು ಸೆಳೆದಿದೆ. ಪ್ರವಾಸಿಗರ ಪಾಲಿಗೆ ಕೂಡ ಚುಂಬಕ ಕೇಂದ್ರ.  1976ರಲ್ಲಿ ಆರಂಭಗೊಂಡ ಇದು ಈಗಲೂ ವಿಸ್ತರಣೆಯಾಗುತ್ತಲೇ ಇದೆ. 

ವಿಜಯನಾಥ ಶೆಣೈ ಅವರ ಅಂತರಾಳದ ಮಾತುಗಳು
*‘ಹೆರಿಟೇಜ್ ವಿಲೇಜ್’ ಕನಸು ರೂಪುಗೊಂಡಿದ್ದು ಹೇಗೆ?
ಸಣ್ಣ ಪ್ರಾಯದಿಂದಲೆ ಇದ್ದಿರಬೇಕು– ಪರಂಪರೆಗೆ ಸೇರಿದ ಕಲಾಪ್ರಕಾರಗಳ ಬಗೆಗೆ ನನಗೆ ಬಹಳಷ್ಟು ಅಭಿಮಾನ. ನಾನು 1960ರಲ್ಲಿ ಬ್ಯಾಂಕ್ ನೌಕರಿಗೆ ಸೇರಿಕೊಂಡೆ. ಅಲ್ಲಿ ರಜೆಗಳು ಹೆಚ್ಚು. ಬಿಡುವಿನ ವೇಳೆಯಲ್ಲಿ ಈ ಮನೆಗಳನ್ನು ನೋಡಲು ಹೋಗುತ್ತಿದ್ದೆ. ನನ್ನ ಖಾಲಿ ಕಣ್ಣು ಹಾಗೂ ಮನಸ್ಸನ್ನು ತುಂಬಿಕೊಳ್ಳಲು ಹೋಗುತ್ತಿದ್ದೆ. ಆ ಸಮಯದಲ್ಲಿ ಭೂ ಮಸೂದೆ ಕಾನೂನು ಜಾರಿಯಾಗಿತ್ತು. ಉಳುವವರೇ ಭೂಮಿಯ ಒಡೆಯರಾದರು.

ಭೂ ಮಾಲೀಕರಿಗೆ ದೊಡ್ಡ ಮನೆಗಳು ಉಳಿದವು. ಗೇಣಿ ವಕ್ಕಲಿಗೆ ಭೂಮಿ ಹೋಯಿತು. ಅವಿಭಕ್ತ ಕುಟುಂಬಗಳು ಪಾಲಾದವು. ಊರಿನ ಯುವಕರು ವಿದ್ಯಾಭ್ಯಾಸದ ಅನುಸಾರ ನಗರಗಳಿಗೆ ಹೋದರು. ಇದರಿಂದ ದೊಡ್ಡ ಮನೆಗಳನ್ನು ನಿರ್ವಹಿಸಲಾರದೆ, ಅವುಗಳನ್ನು ಒಡೆಯಲು ಶುರು ಮಾಡಿದರು. ಅಮೂಲ್ಯವಾದ ಕೆತ್ತನೆಗಳು ಕೆಲವು ಪೀಠೋಪಕರಣವಾದರೆ ಕೆಲವನ್ನು ಒಲೆಗೆ ಹಾಕುತ್ತಿದ್ದರು.

ನಾನು ಅವುಗಳನ್ನು ಕೊಂಡೊಯ್ದು, ಜೋಡಿಸಿ ಮನೆ ಮಾಡಿದೆ. ಇದನ್ನು ನೋಡಲು ಬರುವ ಜನಸಾಗರವನ್ನು ನಾನು ನೋಡಿ ದಂಗಾದೆ. ದೇಶಾದ್ಯಂತ ಬಂದ ಜನರು ಯಾರಾದರೂ ಆಗಬಹುದು– ಆಟೋ ಡ್ರೈವರ್ ಇರಲಿ, ಜಿಲ್ಲಾಧಿಕಾರಿ ಇರಲಿ, ಮಾಧ್ಯಮದವರಿರಲಿ, ಅವರ ಎದೆಯೊಳಗಿನ ಆಸಕ್ತಿಯನ್ನು ನೋಡಿ ‘ನಮ್ಮ ಹಿಂದಿನ ಕಲೆಯಲ್ಲಿ ಎಂಥ ದ್ರವ ಉಂಟು’ ಎಂದು ಹೇಳಿ ಸಂಗ್ರಹ ಶುರುಮಾಡಿದೆ.

ಮನೆ ಮಠ, ಮಂದಿರ ಸೇರಿದಂತೆ ಯಾವುದೇ ಕಟ್ಟಡ ನೆಲಸಮವಾದರೂ ಅದನ್ನು ಸಂಗ್ರಹಿಸಿದೆ. ಇದನ್ನು ನೋಡಿ ಅಂದಿನ ಜಿಲ್ಲಾಧಿಕಾರಿ, ‘ಇವರು ಏನೋ ಮಾಡ್ತಾರೆ’ ಅಂತ ನಮಗೆ ಆರು ಎಕರೆ ಜಮೀನು ಕೊಟ್ಟರು. ಆಸಕ್ತ ಶ್ರೀಮಂತರು ಸಹಾಯ ಮಾಡಿದರು.

ನಾನು ನನ್ನದೇ ರೀತಿಯಲ್ಲಿ ಪಾರಂಪರಿಕ ಮನೆಗಳನ್ನು ನಿರ್ಮಾಣ ಮಾಡಿದೆ. ನೂರಾರು ಮನೆಗಳನ್ನು ನೋಡಿದ ಅನುಭವ ನನಗೆ ಇಲ್ಲಿ ಸಹಾಯಕ್ಕೆ ಬಂತು.

ಇದಕ್ಕೂ ಮೊದಲು ಉಡುಪಿಯಲ್ಲಿ ‘ಶಾಸ್ತ್ರಿಯ ಸಂಗೀತ ಸಭಾ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದೆ. ಭಾರತದ ದಿಗ್ಗಜರಾದ ಎಮ್.ಎಸ್. ಸುಬ್ಬುಲಕ್ಷ್ಮಿ, ಬಿಸ್ಮಿಲ್ಲಾ ಖಾನ್, ಪಂಡಿತ್ ರವಿಶಂಕರ್, ವಸಂತ ಕುಮಾರಿ, ಅಲಿ ಅಕ್ಬರ್ ಖಾನ್– ಹೀಗೆ ಅನೇಕ ಕಲಾವಿದರು ಉಡುಪಿ ಹಾಗೂ ಮಣಿಪಾಲದಲ್ಲಿ ಸಂಗೀತ ಕಛೇರಿ ಮಾಡಿಹೋದರು.

ಜೊತೆಗೆ ಯಕ್ಷಗಾನ ಮಂಡಳ, ತಾಳಮದ್ದಳೆ ಕಲಾಪ್ರಕಾರಗಳನ್ನು ನಡೆಸಿದೆವು. ‘ರೈಟರ್ಸ್ ಕ್ಲಬ್’ ಮೂಲಕ ಪ್ರತಿವಾರ ಗಹನ ಚಿಂತನೆ ನಡೆಸುತ್ತಿದ್ದೆವು. ಎಲ್ಲದಕ್ಕೂ ಗೋಪಾಲಕೃಷ್ಣ ಅಡಿಗರು ಅಧ್ಯಕ್ಷರಾಗಿರುತ್ತಿದ್ದರು. ಇದರಿಂದ ದೊಡ್ಡ ದೊಡ್ಡ ಸಾಹಿತಿಗಳ ಒಡನಾಟವು ಆಯಿತು. ಈ ಅನುಭವಗಳು ಕೂಡ  ನನಗೆ ಉಪಯುಕ್ತವಾದವು.

*‘ಹೆರಿಟೇಜ್‌ ವಿಲೇಜ್‌’ಗೆ ಸಂಬಂಧಿಸಿದಂತೆ ಮುಂದಿನ ನಡೆ ಏನು?
ಪ್ರಸ್ತುತ ನಾನು ‘ಹಸ್ತಶಿಲ್ಪ ಟಸ್ಟ್‌’ನ ಕಾರ್ಯದರ್ಶಿ. ಇದರಲ್ಲಿ ನನ್ನ ಸ್ವಾರ್ಥ ಏನೂ ಇಲ್ಲ. ಇದು ಪಬ್ಲಿಕ್ ಪ್ರಾಪರ್ಟಿ. ಸ್ವಂತದ್ದಲ್ಲ. ಟ್ರಸ್ಟ್‌ನಲ್ಲಿ ಎಂಟು ಹತ್ತು ಮಂದಿ ಸೇರಿಸಿದ್ದೇನೆ. ಎಲ್ಲ ಚಟುವಟಿಕೆಗಳು ಖಾಸಗಿ ಸೊತ್ತಾಗಬಾರದು, ಟ್ರಸ್ಟ್ ಮೂಲಕವೇ ಮುಂದುವರೆಯಬೇಕು. ಇಷ್ಟು ವರ್ಷ ಒಂದು ಒಳ್ಳೆಯ ಸಂಕಲ್ಪದಿಂದ ನಡೆದುಕೊಂಡು ಹೋಗಿದೆ. ಮುಂದೆಯೂ ಹೀಗೆ ನಡೆದುಕೊಂಡು ಹೋಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT